Publish Date: Fri, 03 Feb 2023 (11:26 IST)
Updated Date: Fri, 03 Feb 2023 (11:28 IST)
ರಾಮನಗರ : ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನಿಸಿರುವ ಹೃದಯವಿದ್ರಾವಕ ಘಟನೆ ರಾಮನಗರದಲ್ಲಿ ನಡೆದಿದೆ.
ಹುಟ್ಟೂರು ಬಿಟ್ಟುರೂ ಬೆಂಬಿಡದ ಸಾಲಗಾರ ಕಾಟಕ್ಕೆ ಒಂದೇ ಕುಟುಂಬದ 7 ಜನರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದರಿಂದ ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಇನ್ನು ಜಗತ್ತನ್ನೇ ಅರಿಯದ ಮೂರು ಮುದ್ದು ಕಂದಮ್ಮಗಳು ಸೇರಿದಂತೆ 6 ಮಂದಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಮೂಲತಃ ರಾಮನಗರ ತಾಲೂಕಿನ ಕುಂಬಳಗೂಡು ನಿವಾಸಿ ರಾಜು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಅಲ್ಲದೇ ವಿಪರೀತ ಸಾಲ ಮಾಡಿಕೊಂಡಿದ್ದ. ಸಾಲಗಾರರ ಕಾಟಕ್ಕೆ ಹುಟ್ಟೂರು ತೊರೆದು ಅತ್ತೆ ಮನೆ ದೊಡ್ಡಮಣ್ಣುಗುಡ್ಡೆ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಿದ್ದ.
ಹುಟ್ಟೂರು ತೊರೆದರೂ ರಾಜುಗೆ ಸಾಲಗಾರರ ಕಾಟ ಮಾತ್ರ ತಪ್ಪಿರಲಿಲ್ಲ. ಪಡೆದ ಹಣಕ್ಕೆ ಬಡ್ಡಿಯನ್ನು ಕಟ್ಟಲಾಗದ ಬಡ ಕುಟುಂಬ, ಸಾಲ ಪಡೆದವರಿಂದ ನಿರಂತರ ಕಿರುಕುಳಕ್ಕೆ ಒಳಗಾಗಿ ಬೇಸತ್ತಿದ್ದ. ಕೊನೆಗೆ ಸಾಲಕ್ಕೆ ಹೆದರಿ ಇಡೀ ಕುಟುಂಬದ ಜನರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.