Publish Date: Mon, 30 Jan 2023 (19:37 IST)
Updated Date: Mon, 30 Jan 2023 (19:40 IST)
ಪ್ರಯಾಣಿಕರು ಮರೆತುಹೋದ ವಸ್ತುಗಳನ್ನ ಆಟೋ ಚಾಲಕರು ಹಿಂದಿರುಗಿಸಿದ ಅನೇಕ ಉದಾಹರಣೆಗಳನ್ನ ನೋಡಿರುತ್ತೀರಿ. ಆದರೆ ತಾನು ಮಾಡಿಕೊಂಡಿದ್ದ ಸಾಲ ತೀರಿಸಲು ಪ್ರಯಾಣಿಕನ ಹಣದ ಬ್ಯಾಗ್ ಸಮೇತ ಪರಾರಿಯಾಗಿದ್ದ ಆಟೋ ಚಾಲಕನನ್ನ ಮಲ್ಲೇಶ್ವರಂ ಠಾಣಾ ಪೊಲೀಸರು ಬಂಧಿಸಿದ್ದಾರೆ..
ಜನವರಿ 24ರಂದು ಗಾಂಧೀ ಬಜಾರ್ ನಿಂದ ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯಲ್ಲಿರುವ ಕ್ಲಿನಿಕ್ ಗೆ ತೆರಳಲು ಆರೋಪಿಯ ಆಟೋ ಹತ್ತಿದ್ದ ಪ್ರಯಾಣಿಕರೊಬ್ಬರು, ತಮ್ಮ ಬ್ಯಾಗ್ ಆಟೋದಲ್ಲೇ ಇರಿಸಿ ಪಾರ್ಕಿಂಗ್ ಸ್ಥಳದಲ್ಲೇ ಸ್ವಲ್ಪ ಸಮಯ ಕಾಯುವಂತೆ ಆಟೋ ಚಾಲಕ ರಂಗಸ್ವಾಮಿಗೆ ಸೂಚಿಸಿದ್ದರು. ಪ್ರಯಾಣಿಕರ ಸೂಚನೆಗೆ ಸಮ್ಮತಿಸಿದ್ದ ಆರೋಪಿ ಅವರ ಬ್ಯಾಗಿನಲ್ಲಿದ್ದ 1.5 ಲಕ್ಷ ರೂ ಗಮನಿಸಿದ್ದ. ಸಾಲ ಮಾಡಿಕೊಂಡಿದ್ದ ಆರೋಪಿ ಹಣ ನೋಡಿದ ತಕ್ಷಣ ತನ್ನ ಸಾಲ ತೀರಿಸಬಹುದು ಎಂಬ ಆಲೋಚನೆಯಿಂದ ಬ್ಯಾಗ್ ಸಮೇತ ಪರಾರಿಯಾಗಿದ್ದ. ಕ್ಲಿನಿಕ್ ನಿಂದ ಬಂದು ನೋಡಿದಾಗ ಬ್ಯಾಗ್ ಜೊತೆ ಆಟೋ ಚಾಲಕ ಪರಾರಿಯಾಗಿದ್ದನ್ನ ಕಂಡ ಪ್ರಯಾಣಿಕರು ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಮಲ್ಲೇಶ್ವರಂ ಠಾಣಾ ಪೊಲೀಸರು ಆಟೋ ಚಾಲಕ ರಂಗಸ್ವಾಮಿಯನ್ನ ಬಂಧಿಸಿದ್ದು, 1.5 ಲಕ್ಷ ರೂ ನಗದು, ಆಟೋ ರಿಕ್ಷಾವನ್ನ ವಶಕ್ಕೆ ಪಡೆಯಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.