Publish Date: Sat, 18 Oct 2025 (13:59 IST)
Updated Date: Sat, 18 Oct 2025 (14:02 IST)
ಬೆಂಗಳೂರು: ಸಿಎಂ ಕುರ್ಚಿ ಚರ್ಚೆ ನಡುವೆ ನಿಮ್ಮ ತಾಳ್ಮೆಗೆ ತಕ್ಕ ಫಲ ಸಿಗಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಗೆ ಹೈಕಮಾಂಡ್ ನಿಂದ ಸಂದೇಶ ಬಂದಿದೆ.
ರಾಜ್ಯದಲ್ಲಿ ನವಂಬರ್ ಕ್ರಾಂತಿಯಾಗಲಿದೆ, ಮುಖ್ಯಮಂತ್ರಿ ಬದಲಾವಣೆಯಾಗಲಿದೆ ಎಂದು ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ಡಿಕೆ ಶಿವಕುಮಾರ್ ಗೆ ಸ್ವತಃ ಮಲ್ಲಿಕಾರ್ಜುನ ಖರ್ಗೆ ಕಡೆಯಿಂದ ಸಂದೇಶ ರವಾನೆಯಾಗಿದೆ. ನಿಮ್ಮ ತಾಳ್ಮೆಗೆ ತಕ್ಕ ಪ್ರತಿಫಲ ಸಿಗಲಿದೆ ಎಂದು ಸಂದೇಶ ಬಂದಿದೆ.
ನಿನ್ನೆ ತಡರಾತ್ರಿ ಖರ್ಗೆ ನಿವಾಸಕ್ಕೆ ಭೇಟಿ ನೀಡಿರುವ ಡಿಕೆ ಶಿವಕುಮಾರ್ ಬಹಳ ಹೊತ್ತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸಿಎಂ ಬದಲಾವಣೆ ಬಗ್ಗೆಯೂ ಪ್ರಸ್ತಾಪವಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ವೇಳೆ ನಿಮ್ಮ ಪಕ್ಷ ನಿಷ್ಠೆ ಮತ್ತು ತಾಳ್ಮೆಯನ್ನು ಹೈಕಮಾಂಡ್ ಗಮನಿಸುತ್ತಿದೆ. ಇದಕ್ಕೆ ತಕ್ಕ ಫಲ ಸಿಗುವುದು ಎಂದಿದ್ದಾರೆ ಎಂಬ ಮಾಹಿತಿಯಿದೆ.
ಹೈಮಾಂಡ್ ಮನಸ್ಸಿನಲ್ಲೂ ಕೆಲವು ವಿಚಾರಗಳಿವೆ. ಒಂದಿಷ್ಟು ಸಮಯದವರೆಗೆ ತಾಳ್ಮೆಯಿಂದ ಕಾಯಿರಿ. ಬಿಹಾರ ಚುನಾವಣೆ ಬಳಿಕ ಮಾತನಾಡೋಣ ಎಂದು ಡಿಕೆಶಿಗೆ ಹೇಳಿದ್ದಾರೆ. ಹೀಗಾಗಿ ಈಗ ಮುಖ್ಯಮಂತ್ರಿ ಬದಲಾವಣೆ ವಿಚಾರ ಕುತೂಹಲ ಮೂಡಿಸಿದೆ.