Publish Date: Tue, 13 Jul 2021 (19:46 IST)
Updated Date: Tue, 13 Jul 2021 (19:48 IST)
ನಟ ದರ್ಶನ್ ಅವರಿಂದ ಹರ್ಷ ಅವರನ್ನು ದೂರ ಮಾಡಲು ನಿರ್ಮಾಪಕ ಉಮಾಪತಿ ಅವರೇ ಕಾರಣ. ನನ್ನ ವಿರುದ್ಧ ಆರೋಪ ಮಾಡಿದ ಪ್ರತಿಯೊಬ್ಬರ ವಿರುದ್ಧವೂ ಕೇಸ್ ಹಾಕ್ತೀನಿ ಎಂದು 25 ಕೋಟಿ ವಂಚನೆ ಯತ್ನ ಪ್ರಕರಣದ ಮಹಿಳೆ ಅರುಣಾ ಕುಮಾರಿ ಹೇಳಿದ್ದಾರೆ.
ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಹಾಗೂ ಉದ್ಯಮಿ ನಮಗೆ ಈ ಹಿಂದೆ ಅರುಣಾಕುಮಾರಿ 15 ಲಕ್ಷ ರೂ. ವಂಚಿಸಿದ್ದಾರೆ ಸುದ್ದಿಗೋಷ್ಠಿಯಲ್ಲಿ ಆರೋಪಿದ ಬೆನ್ನಲ್ಲೇ ಟಿವಿ ಚಾನೆಲ್ ವೊಂದಕ್ಕೆ ದೂರವಾಣಿಯಲ್ಲಿ ಮಾತನಾಡಿದ ಅವರು, ಹೆಣ್ಣು ಎಂದು ಕೂಡ ನೋಡದೇ ನನ್ನನ್ನು ಎಲ್ಲರೂ ತಮಗೆ ಬೇಕಾದಂತೆ ಬಳಸಿಕೊಂಡು ಪೇಪರ್ ನಂತೆ ಎಸೆದಿದ್ದಾರೆ ಎಂದು ಆರೋಪಿಸಿದರು.
ನನ್ನನ್ನು ದರ್ಶನ್ ಗೆ ಪರಿಚಯ ಮಾಡಿಸಿದ್ದೇ ಉಮಾಪತಿ. ನನ್ನನ್ನು ಬ್ಯಾಂಕ್ ಮ್ಯಾನೇಜರ್ ಅಂತ ಹೇಳಿದ್ದು ಕೂಡ ಅವರೇ. ನನಗೆ ಸ್ವಂತ ಮನೆ ಕೊಡಿಸುತ್ತೇನೆ ಎಂದು ನಂಬಿಸಿ ಈ ಕೆಲಸ ಮಾಡಿಸಿದರು. ನಾನು ಯಾವುದೇ ಕಳ್ಳತನ, ದಾಖಲೆ ಫೋರ್ಜರಿ ಮಾಡಿಲ್ಲ. ದರ್ಶನ್ ಭೇಟಿ ವೇಳೆ ಹೇಗೆ ನಡೆದುಕೊಳ್ಳಬೇಕು ಹೇಗೆ ಮಾತನಾಡಬೇಕು ಎಂದು ಉಮಾಪತಿ ಹೇಳಿಕೊಡುತ್ತಿದ್ದ ಎಂದು ಅರುಣಾ ಕುಮಾರಿ ವಿವರಿಸಿದರು.
ಉಮಾಪತಿ ಜೊತೆಗಿನ ಎಲ್ಲಾ ಚಾಟ್ ಹಿಸ್ಟರಿಯನ್ನೂ ತೆಗೆಸುತ್ತೇನೆ. ನಕಲಿ ಐಡಿ ಕಾರ್ಡ್ ಕೂಡ ನಾನು ಮಾಡಿದ್ದಲ್ಲ. ಎಲ್ಲಾ ದಾಖಲೆಗಳನ್ನು ಪಡೆದ ನಂತರ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ. ಸದ್ಯದ ಪರಿಸ್ಥಿತಿ ಸರಿಯಿಲ್ಲ ಎಂದು ಅರುಣಾಕುಮಾರಿ ಹೇಳಿದರು.