Publish Date: Sat, 26 Jul 2025 (11:27 IST)
Updated Date: Sat, 26 Jul 2025 (11:31 IST)
ಬೆಂಗಳೂರು: ಚುನಾವಣಾ ಆಯೋಗದ ಬಗ್ಗೆ ಆರೋಪ ಮಾಡ್ತೀರಲ್ಲಾ, ಕಾಂಗ್ರೆಸ್ ಕೂಡಾ ವಿಧಾನಸಭೆಯಲ್ಲಿ ಅಕ್ರಮದಿಂದಲೇ ಗೆದ್ದಿತಾ ಎಂದು ರಾಹುಲ್ ಗಾಂಧಿ ಚುನಾವಣಾ ಅಕ್ರಮ ಆರೋಪಕ್ಕೆ ಬಿಜೆಪಿ ನಾಯಕ ಸಿಟಿ ರವಿ ತಿರುಗೇಟು ನೀಡಿದ್ದಾರೆ.
ಮೊನ್ನೆಯಷ್ಟೇ ರಾಹುಲ್ ಗಾಂಧಿ ಸಂಸತ್ ಭವನದ ಮುಂದೆ ಮಾಧ್ಯಮಗಳೊಮದಿಗೆ ಮಾತನಾಡುವಾಗ ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಒಂದು ಕ್ಷೇತ್ರ ಸೇರಿದಂತೆ ದೇಶದಾದ್ಯಂತ ಚುನಾವಣೆಯಲ್ಲಿ ಚುನಾವಣಾ ಆಯೋಗ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಸೇರಿಸುವ ಮತ್ತು ತೆಗೆದು ಹಾಕುವ ಮೂಲಕ ಅಕ್ರಮ ಮಾಡಿದೆ. ಬಿಜೆಪಿ ಅಕ್ರಮದಿಂದಲೇ ಗೆಲ್ಲುತ್ತಿದೆ ಎಂದು ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಟಿ ರವಿ, ಚುನಾವಣಾ ಆಯೋಗ ಸಾಂವಿಧಾನಿಕ ಸಂಸ್ಥೆ ಅದರ ಮೇಲೆ ಯಾವುದೇ ಸಾಕ್ಷಿ ಆಧಾರವಿಲ್ಲದೆ, ಆರೋಪ ಮಾಡುವುದು ಸಂವಿಧಾನ ವಿರೋಧಿಗಳ ಕೃತ್ಯ. ಪ್ರಜಾಪ್ರಭುತ್ವದಲ್ಲಿ, ಜನಾದೇಶದ ಮೇಲೆ ನಂಬಿಕೆ ಇಡದ ಕಾಂಗ್ರೆಸ್ಸಿನದ್ದು ಪ್ರಜಾಪ್ರಭುತ್ವ ವಿರೋಧಿ ಹೀನ ಮನಸ್ಥಿತಿಗೆ ಹಿಡಿದ ಕೈಗನ್ನಡಿ.
ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸದೇ ಇದ್ದರೆ, ಅದು ಹೇಗೆ ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ, ನಿಮ್ಮ ಇಂಡಿ ಒಕ್ಕೂಟದ ಪಕ್ಷಗಳು ಗೆದ್ದವು? ಅವರೂ ಅಕ್ರಮ ಎಸಗಿದ್ದಾರೆಯೇ? ಕರ್ನಾಟಕದಲ್ಲಿ 136 ಸ್ಥಾನಗಳನ್ನು ಗೆದ್ದ ನಿಮ್ಮ ಪಕ್ಷವೂ ಚುನಾವಣಾ ಅಕ್ರಮ ನಡಸಿದ್ದೀರಾ?
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಉತ್ತರಪ್ರದೇಶದಲ್ಲಿ ಹೇಗೆ 30ಕ್ಕೂ ಅಧಿಕ ಸೀಟುಗಳನ್ನು ಗೆದ್ದಿದ್ದೀರಾ? ತನ್ನ ವೈಫಲ್ಯಕ್ಕೆ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಕಾಂಗ್ರೆಸ್ಸಿನ ಹಳೆ ಚಾಳಿ ಎಂದು ವಾಗ್ದಾಳಿ ನಡೆಸಿದ್ದಾರೆ.