ಬೆಂಗಳೂರು: ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಬರುವವರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ವಿಡಿಯೋ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಬರಿಮಲೆ ಯಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಆದರೆ ಇವರ ಸುರಕ್ಷತೆಗೆ, ಯೋಗ ಕ್ಷೇಮಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿಲ್ಲ ಎಂದು ಸಿಟಿ ರವಿ ಆಕ್ರೋಶ ಹೊರಹಾಕಿದ್ದಾರೆ. ಕೇರಳದ ಎಲ್ ಡಿಎಫ್ ಸರ್ಕಾರದ ನಿರ್ಲ್ಯಕ್ಷದಿಂದಾಗಿ ಪ್ರತೀ ವರ್ಷವೂ ಶಬರಿಮಲೆ ಯಾತ್ರೆ ಎನ್ನುವುದು ಸಂಕಷ್ಟದ ಸರಮಾಲೆಯಾಗುತ್ತಿದೆ ಎಂದಿದ್ದಾರೆ.
ಯಾತ್ರಿಕರ ಪ್ರಯಾಣ ಸುಗಮವಾಗಿಸುವದರ ಬದಲು ಕಳಪೆ ವ್ಯವಸ್ಥೆ, ಯೋಜನೆಗಳಿಂದಾಗಿ ಸಂಕಷ್ಟ ಹೆಚ್ಚಿಸುತ್ತಿದೆ. ಇದರಿಂದಾಗಿ ಭಕ್ತರಿಗೆ ಶಬರಿಮಲೆ ಯಾತ್ರೆ ಕೈಗೊಳ್ಳುವುದೇ ತ್ರಾಸದಾಯಕವಾಗಿದೆ. ಇದು ಇಲ್ಲಿ ಸುದೀರ್ಘ ಕಾಲದಿಂದ ಆಡಳಿತದಲ್ಲಿರುವ ಕಮ್ಯುನಿಷ್ಟ್ ಸರ್ಕಾರ ಹಿಂದೂಗಳನ್ನು ದಮನಿಸುವ ಪ್ರಯತ್ನದ ಭಾಗವಾಗಿದೆ.
ಇದಲ್ಲದೆ ಎಲ್ ಡಿಎಫ್ ಸರ್ಕಾರ ಇಲ್ಲಿ ಅಯ್ಯಪ್ಪ ಸೇವಾ ಸಂಘಂ ಸೇರಿದಂತೆ ಕೆಲವು ಸಂಘ ಸಂಸ್ಥೆಗಳು ನೆರವು ನೀಡುವುದಕ್ಕೂ ನಿರ್ಬಂಧ ಹೇರಿದೆ. ಇವೆಲ್ಲವೂ ಭಕ್ತರಿಗೆ ಅನುಕೂಲ ಮಾಡಿಕೊಡಲು ಸೇವೆ ಮಾಡುತ್ತಿದ್ದವು. ಆದರೆ ಈ ಸಂಘಗಳಿಗೆ ನಿರ್ಬಂಧ ವಿಧಿಸಲಾಗುತ್ತಿದೆ. ಇದಕ್ಕೆಲ್ಲಾ ಆ ಅಯ್ಯಪ್ಪ ಸ್ವಾಮಿಯೇ ಉತ್ತರ ಕೊಡಬೇಕು ಎಂದು ಸಿಟಿ ರವಿ ಆಕ್ರೋಶ ಹೊರಹಾಕಿದ್ದಾರೆ.