Publish Date: Tue, 30 Jan 2024 (21:04 IST)
Updated Date: Tue, 30 Jan 2024 (20:10 IST)
ಬೆಂಗಳೂರು : ಗೌರಿಶಂಕರ ಟ್ರಸ್ಟ್ ವತಿಯಿಂದ ಕೆರೆಗೋಡು ಗ್ರಾಮದಲ್ಲಿ ಧ್ವಜಸ್ತಂಭ ನಿರ್ಮಾಣಕ್ಕೆ ಅನುಮತಿ ಕೇಳಲಾಗಿತ್ತು. ಕೆರೆಗೋಡು ಗ್ರಾಮಪಂಚಾಯಿತಿ ಅನುಮತಿಯನ್ನೂ ಸಹ ನೀಡಿತ್ತು. ಅನುಮತಿಯಲ್ಲಿ ರಾಷ್ಟ್ರ ಧ್ವಜ ಅಥವಾ ಕೇಸರಿ ಧ್ವಜ ಎಂದು ಪ್ರತ್ಯೇಕವಾಗಿ ನಮೂದಿಸಿರಲಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದ ಕೆರೆಗೋಡು ಗ್ರಾಮದಲ್ಲಿ ನಡೆದ ಹನುಮ ಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸುಳ್ಳು ದಾಖಲೆ ಸೃಷ್ಟಸಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮಂಗಳವಾರ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿದ ಅವರು ತಾವೂ ಸಹ ತಮ್ಮ ಅಭಿಮಾನಿಗಳೂ ಹಾಗೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾಗಿ ಹೇಳಿದರು. ಜ.19 ರಂದು ಅನುಮತಿ ಕೇಳಿರುವಂತೆ ಕಾಂಗ್ರೆಸ್ ನಕಲಿ ದಾಖಲೆ ಸೃಷ್ಟಿಸಿದೆ ಎಂದು ಆರೋಪಿಸಿದ ಎಚ್ಡಿಕೆ ಜ.26 ರಂದು ರಾಷ್ಟ್ರಧ್ವಜ ಹಾರಿಸಿರುವ ಗ್ರಾಮಸ್ಥರೇ ಮಾರನೆಯ ದಿನ ಹನುಮ ಧ್ವಜ ಹಾರಿಸಿದ್ದಾರೆ. ಈ ಧ್ವಜಸ್ತಂಭವನ್ನು ಸ್ವತಃ ಸಿಎಂ ಸಿದ್ದರಾಮಯ್ಯನವರೇ ಉದ್ಘಾಟನೆ ಮಾಡಿದ್ದು, ಶಾಸಕರನ್ನು ಆಹ್ವಾನಿಸದ ಕಾರಣ ಇವೆಲ್ಲಾ ನಡೆದಿದೆ ಎಂದರು.