Publish Date: Thu, 19 Jan 2023 (07:10 IST)
Updated Date: Thu, 19 Jan 2023 (08:02 IST)
ತುಮಕೂರು : ಜ.20 ಮತ್ತು 21ರಂದು ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ನಡೆಯಲಿದೆ ಎಂದು ರಾಜ್ಯ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಆಶಯದಂತೆ ಕಾರ್ಯಕ್ರಮ ಏರ್ಪಡಿಸಿದ್ದು, ಆರ್ಟಿಪಿ ಕನ್ವೆನ್ಶನ್ ಸೆಂಟರ್, ಶೆಟ್ಟಿ ಹಳ್ಳಿ ರಿಂಗ್ ರೋಡ್ ತುಮಕೂರಿನಲ್ಲಿ ಕಾರ್ಯಕಾರಿಣಿ ನಡೆಯಲಿದೆ ಎಂದರು.
ಮಹಿಳೆಯರಿಗೆ ವಿಶೇಷ ಗೌರವ, ಘನತೆಯನ್ನು ಕರ್ನಾಟಕ ರಾಜ್ಯ ನೀಡಿದೆ. ಕಳೆದ 8 ವರ್ಷಗಳ ಅವಧಿಯಲ್ಲಿ ನಮ್ಮ ರಾಜ್ಯದ ಅನೇಕ ಸಾಧಕ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪದ್ಮ ಪುರಸ್ಕಾರ ಸೇರಿ ವಿಶೇಷ ಗೌರವ ನೀಡಿದ್ದಾರೆ. ತುಮಕೂರು ಜಿಲ್ಲೆಯ ಸೂಲಗಿತ್ತಿ ನರಸಮ್ಮ, ಸುಕ್ರಿ ಬೊಮ್ಮನಗೌಡ ಅವರಿಗೂ ಗೌರವ ಲಭಿಸಿದೆ. ಪರಿಸರಕ್ಕೆ ಕೊಡುಗೆ ನೀಡಿದ ಸಾಲುಮರದ ತಿಮ್ಮಕ್ಕ ಅವರನ್ನೂ ಗೌರವಿಸಲಾಗಿದೆ ಎಂದು ತಿಳಿಸಿದರು.