Publish Date: Sat, 24 Aug 2024 (11:29 IST)
Updated Date: Sat, 24 Aug 2024 (11:35 IST)
ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಫುಲ್ ಸಪೋರ್ಟ್ ಮಾಡಿರುವ ಕಾಂಗ್ರೆಸ್ ಹೈಕಮಾಂಡ್ ಈಗ ರಾಜ್ಯದ ನಾಲ್ಕೈದು ಸಚಿವರಿಗೆ ಕೊಕ್ ನೀಡಲು ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಮುಡಾ ಹಗರಣದ ಬಗ್ಗೆ ಹೈಕಮಾಂಡ್ ಬೆಂಬಲ ಕೋರಲು ನಿನ್ನೆ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದರು. ಅಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ವೇಳೆ ಸಿದ್ದರಾಮಯ್ಯಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.
ಆದರೆ ರಾಜ್ಯ ಸಚಿವ ಸಂಪುಟದಲ್ಲಿ ನಾಲ್ಕೈದು ಸಚಿವರಿಗೆ ಕೊಕ್ ನೀಡಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷದ ಮೇಲಾಗಿದೆ. ಈಗ ಸಂಪುಟ ಪುನರಾಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಕೆಲವು ಸಚಿವರ ಬದಲಾವಣೆ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆಯೂ ಚರ್ಚೆಯಾಗಿದೆ.
ಸಚಿವ ಸಂಪುಟ ಪುನರಾಚನೆ ಎಂದರೆ ಅಸಮಾಧಾನಗಳೂ ಹಿಂದೆಯೇ ಬರುತ್ತವೆ. ಸದ್ಯಕ್ಕೆ ಮುಡಾ ಹಗರಣದ ಕಾವೇರಿದ್ದು, ಇದು ಕೊಂಚ ತಣ್ಣಗಾದ ಬಳಿಕವೇ ಸಚಿವ ಸಂಪುಟ ಪುನರಾಚನೆ ಕೆಲಸಗಳು ಆರಂಭವಾಗಲಿದೆ. ಆದರೆ ಯಾವೆಲ್ಲಾ ಸಚಿವರ ತಲೆದಂಡವಾಗಲಿದೆ ಎಂಬುದು ಇನ್ನಷ್ಟೇ ಗೊತ್ತಾಗಲಿದೆ.