Publish Date: Wed, 04 May 2022 (17:51 IST)
Updated Date: Wed, 04 May 2022 (17:53 IST)
ಅಡ್ರೆಸ್ ಇಲ್ಲದವರ ಪಕ್ಷದಿಂದ ನಾನೇನು ಕಲಿಯಬೇಕಾಗಿಲ್ಲ. ದಾಖಲೆ ಇಲ್ಲದೇ ಸುಮ್ಮನೆ ಆರೋಪ ಮಾಡಿದರೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ಸಚಿವ ಅಶ್ವಥ್ ನಾರಾಯಣ್ ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.
ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ ಅಶ್ವಥ್ ನಾರಾಯಣ್ ಪಾತ್ರವಿಲ್ಲದೆ. ಅವರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅಶ್ವಥ್ ನಾರಾಯಣ್, ಜೈಲಿಗೆ ಹೋಗಿ ಬಂದವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರ ಸಹವಾಸ ಮಾಡಿ ಸಿದ್ದರಾಮಯ್ಯ ಕೂಡ ಮಾತನಾಡುತ್ತಿದ್ದಾರೆ ಎಂದರು.
ನಾನು ಭ್ರಷ್ಟಾಚಾರ ಮಾಡಲು ರಾಜಕೀಯಕ್ಕೆ ಬಂದಿಲ್ಲ. ನನಗೆ ಅದರ ಅಗತ್ಯವೂ ಇಲ್ಲ. ಯಾರಿಗೂ ನಾನು ನೆರವು ನೀಡಿಲ್ಲ. ಪಿಎಸ್ ಐ ಅಕ್ರಮದ ಆರೋಪ ಬಂದ ೨ ಗಂಟೆಯಲ್ಲೇ ನಮ್ಮ ಸರಕಾರ ತನಿಖೆಗೆ ಆದೇಶ ನೀಡಿದೆ. ಆದರೂ ನಮ್ಮ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ತನಿಖೆ ಮುಚ್ಚಿ ಹಾಕುವುದಕ್ಕೆ ನಾವೇ ಕಾಂಗ್ರೆಸನವರಲ್ಲ. ಯಾವ ಆಧಾರದ ಮೇಲೆ ಅವರು ಹೇಳಿಕೆಗಳನ್ನ ಕೊಟ್ಟಿದ್ದಾರೆ ಅನ್ನೋದನ್ನ ಮಾಧ್ಯಮದವರು ಪರಿಶೀಲಿಸಬೇಕು. ಉತ್ತಮವಾದ ವ್ಯಕ್ತಿ ಮೇಲೆ ಈ ರೀತಿ ನಿರಾಧರವಾಗಿ ಆರೋಪ ಮಾಡುವುದನ್ನ ಖಂಡಿಸುತ್ತೇನೆ ಎಂದು ಅಶ್ವಥ್ ನಾರಾಯಣ್ ಸ್ಪಷ್ಟಪಡಿಸಿದರು.