Publish Date: Wed, 07 Feb 2024 (19:20 IST)
Updated Date: Wed, 07 Feb 2024 (19:38 IST)
ನವದೆಹಲಿ : ಕೇಂದ್ರ ಮತ್ತು ರಾಜ್ಯ ಸರ್ಕಾರದ ಖರ್ಚುವೆಚ್ಚಗಳನ್ನು ಸರಿದೂಗಿಸಲು ನಮ್ಮ ದೇಶದ ಸಂವಿಧಾನ ಏಳನೇ ಶೆಡ್ಯೂಲ್ ನಲ್ಲಿ ಹಣಕಾಸಿನ ಆಯೋಗ ರಚಿಸಿದೆ. ಹಣಕಾಸಿನ ಆಯೋಗದಲ್ಲಿ ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ತೆರಿಗೆ ಪಾಲನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದುವರೆಗೂ 15 ಹಣಕಾಸಿನ ಆಯೋಗಗಳು ತಮ್ಮ ವರದಿಯನ್ನು ನೀಡಿದ್ದು, ಈಗ 16 ನೇ ಆಯೋಗ ರಚನೆಯಾಗಿದೆ. ಈ ಹಿಂದಿನ ಹಣಕಾಸು ಆಯೋಗಗಳು ನೀಡಿದ್ದ ವರದಿಯ ಮೇಲೆ ಕೇಂದ್ರ ಸರ್ಕಾರ ಹಣ ಹಂಚಿಕೆ ಮಾಡಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕೇವಲ 14 ನೇ ಹಣಕಾಸಿನ ವರದಿಯನ್ನು ನೋಡುವುದಾದರೆ ಕರ್ನಾಟಕ ರಾಜ್ಯಕ್ಕೆ ಶೇ 42 ಹಾಗೂ ಶೇ 58 ರಷ್ಟು ಕೇಂದ್ರ ಸರ್ಕಾರಕ್ಕೆ ದೊರೆಯಬೇಕು. ಇದೇ ಪಾಲನ್ನು 15 ನೇ ಹಣಕಾಸಿನ ವರದಿಯಲ್ಲಿ ಇನ್ನಷ್ಟು ಕಡಿಮೆ ಮಾಡಲಾಗಿದೆ. 1971 ರ ಜನಗಣತಿಯ ಆಧಾರದ ಮೇಲೆ ತೆರಿಗೆ ಹೆಚ್ಚಳ ಮಾಡಲಾಗುತ್ತಿದೆ. ಆದರೆ ಅನುದಾನ ಹಂಚಿಕೆಯಲ್ಲಿ 2011 ರ ಜನಗಣತಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ನಾವೆಲ್ಲರೂ ಒಕ್ಕೂಟ ವ್ಯವಸ್ಥೆಯಲಿದ್ದೇವೆ. ನಾವು ಯಾರೂ ಒಕ್ಕೂಟ ವ್ಯವಸ್ಥೆಯ ವಿರುದ್ದ ಇಲ್ಲ. ನಮ್ಮ ಸಂವಿಧಾನವನ್ನು ಬಲಪಡಿಸುವ ಸಲುವಾಗಿ ಇಂಥಾ ಪ್ರತಿಭಟನೆಗಳು ಹಾಗೂ ಚಳುವಳಿಗಳು ಅನಿವಾರ್ಯವಾಗಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಬುಧವಾರ ಕಾಂಗ್ರೆಸ್ ವತಿಯಿಂದ ಕೇಂದ್ರ ಸರ್ಕಾರದ ವಿರುದ್ದ ದೆಹಲಿಯ ಜಂತರ್ ಮಂತರ್ ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ಕರ್ನಾಟಕದ ಬಗ್ಗೆ ತಾರತಮ್ಯ ಎಸೆಗುತ್ತಿದೆ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. ರಾಜ್ಯದ ಎಲ್ಲಾ ಕಾಂಗ್ರೆಸ್ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ನೂರಾರು ಮಂದಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.