Publish Date: Wed, 09 Jul 2025 (17:26 IST)
Updated Date: Wed, 09 Jul 2025 (17:29 IST)
ನವದೆಹಲಿ: ರಾಜಯದಲ್ಲಿ ಕಾಂಗ್ರೆಸ್ ನಾಯಕರೊಳಗೆ ಸಿಎಂ ಕುರ್ಚಿಗಾಗಿ ವಾಗ್ವಾದಗಳು ಜೋರಾಗಿದ್ದರೆ ಇತ್ತ ದೆಹಲಿಯಲ್ಲಿ ಸಿಎಂ-ಡಿಸಿಎಂ ಒಂದೇ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ.
ದೆಹಲಿಯಲ್ಲಿ ಹೈಕಮಾಂಡ್ ನಾಯಕರು ಮತ್ತು ಕೇಂದ್ರ ಮಂತ್ರಿಗಳನ್ನು ಭೇಟಿ ಮಾಡಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬೀಡುಬಿಟ್ಟಿದ್ದಾರೆ. ಡಿಕೆ ಶಿವಕುಮಾರ್ ನಿನ್ನೆಯಿಂದ ದೆಹಲಿಯಲ್ಲಿದ್ದರೆ, ಸಿಎಂ ಇಂದು ಅವರನ್ನು ಕೂಡಿಕೊಂಡಿದ್ದಾರೆ.
ನಿನ್ನೆ ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿದ್ದ ಡಿಕೆ ಶಿವಕುಮಾರ್ ರಾಜ್ಯದ ಯೋಜನೆಗಳಿಗೆ ಸಹಕಾರ ಕೋರಿದ್ದರು. ಇಂದು ಸಿಎಂ ಕೂಡಾ ಜೊತೆಯಾಗಿದ್ದು ಇಬ್ಬರೂ ಜೊತೆ ಜೊತೆಯಲ್ಲಿಯೇ ಒಂದೇ ಕಾರಿನಲ್ಲಿ ಓಡಾಡುವ ಮೂಲಕ ಭಿನ್ನಾಭಿಪ್ರಾಯಗಳ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ನಾಳೆ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಭೇಟಿಯಾಗುವ ಸಾಧ್ಯತೆಯಿದೆ. ಮೇಲ್ಮನೆಗೆ ಸದಸ್ಯರನ್ನು ಆಯ್ಕೆ ಮಾಡುವ ವಿಚಾರವಾಗಿ ಇಬ್ಬರೂ ನಾಯಕರು ರಾಹುಲ್ ಜೊತೆ ನಾಳೆ ಚರ್ಚೆ ನಡೆಸುವ ಸಾಧ್ಯತೆಯಿದೆ. ಇದಾದ ಬಳಿಕ ಇಬ್ಬರೂ ದೆಹಲಿಯಿಂದ ಮರಳಲಿದ್ದಾರೆ.