Publish Date: Tue, 08 Jul 2025 (16:46 IST)
Updated Date: Tue, 08 Jul 2025 (16:48 IST)
ಬೆಂಗಳೂರು: ಸಿಎಂ, ಡಿಸಿಎಂಗೆ ದೆಹಲಿಯಲ್ಲಿ ಏನೋ ಕೆಲಸ ಇರುತ್ತೆ, ಅದಕ್ಕೆ ಹೋಗಿದ್ದಾರೆ. ಅದರಲ್ಲಿ ವಿಶೇಷ ಬಣ್ಣ ಬೇಡ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಇಂದು ಡಿಸಿಎಂ ಡಿಕೆ ಶಿವಕುಮಾರ್, ನಾಳೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡಲಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆಯಲ್ಲಿರುವಾಗಲೇ ಸಿಎಂ, ಡಿಸಿಎಂ ದೆಹಲಿ ಭೇಟಿ ಚರ್ಚೆಗೆ ಕಾರಣವಾಗಿದೆ. ಇದರ ಬಗ್ಗೆ ಇಂದು ಮಾಧ್ಯಮಗಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದ ವಿಚಾರವಾಗಿ ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡುವುದಕ್ಕೆ, ಹೈಕಮಾಂಡ್ ಭೇಟಿ ಮಾಡಿ ಮಾತನಾಡುವುದಕ್ಕೆ ಏನೇನೋ ಕೆಲಸಗಳಿರುತ್ತವೆ. ಹೋಗಿದ್ದಾರೆ. ನಾವೂ ಹೋಗ್ತಾ ಇರ್ತೇವೆ. ರಾಜ್ಯದ ಕೆಲಸಕ್ಕೆ ಸಂಬಂಧಿಸಿದಂತೆ ಕೇಂದ್ರ ನಾಯಕರನ್ನ ಭೇಟಿ ಮಾಡಿ ಮಾಡಬೇಕಾಗುತ್ತದೆ. ಹಾಗಾಗಿ ಇದಕ್ಕೆ ವಿಶೇಷ ಬಣ್ಣ ಬೇಡ ಎಂದಿದ್ದಾರೆ.
ಇನ್ನು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ ಅವರು ಬಿಜೆಪಿಯವರು ನಾವು 130 ಸೀಟು ಬಂದಾಗಲೂ ಸರ್ಕಾರ ಮೂರೇ ತಿಂಗಳಿಗೆ ಬಿದ್ದು ಹೋಗುತ್ತದೆ ಎಂದಿದ್ದರು. ಅವರು ಒಂದೊಂದೇ ಮಾತನಾಡುತ್ತಾರೆ. ಯಾಕೆಂದರೆ ಅವರಿಗೆ ಮಾಡಕ್ಕೆ ಕೆಲಸ ಇಲ್ಲ. ಅಂತಹ ಏನೇ ನಿರ್ಧಾರಗಳಿದ್ದರೂ ಹೈಕಮಾಂಡ್ ಕೈಗೊಳ್ಳುತ್ತದೆ ಎಂದಿದ್ದಾರೆ.