Publish Date: Mon, 01 Apr 2024 (09:17 IST)
Updated Date: Mon, 01 Apr 2024 (09:23 IST)
ಕೋಲಾರ: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ದೇಶದಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದೆ. ಆಯಾ ಪ್ರದೇಶಗಳಲ್ಲಿ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.
ಅಕ್ರಮವಾಗಿ ಮತದಾರರಿಗೆ ಹಂಚಲು ಹಣ, ಸೀರೆ ಇತ್ಯಾದಿಗಳನ್ನು ಕೊಂಡೊಯ್ಯದಂತೆ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ಎಲ್ಲಾ ಕಡೆ ಇದು ಜಾರಿಯಲ್ಲಿದ್ದು ವಾಹನ ತಪಾಸಣೆ ಬಳಿಕ ಸವಾರರ ವಿವರ ಬರೆದುಕೊಂಡು ಕಳುಹಿಸಲಾಗುತ್ತಿದೆ.
ಇದೀಗ ಪೊಲೀಸರು ಸಿಎಂ ಸಿದ್ದರಾಮಯ್ಯ ಕಾರು ತಡೆದು ತಪಾಸಣೆ ಮಾಡಿದ್ದಾರೆ. ಕೋಲಾರದ ರಾಮಸಂದ್ರ ಬಳಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಭೈರತಿ ಸುರೇಶ್ ಕಾರನ್ನು ತಡೆದು ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ಮಾರ್ಗವಾಗಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕ ನಂಜೇಗೌಡ ಸಹೋದರನ ಮಗಳ ಮದುವೆಗೆ ಹೋಗಿದ್ದರು.
ಈ ವೇಳೆ ಡಿಸಿ ಅಕ್ರಂ ಪಾಷಾ ನೇತೃತ್ವದ ತಂಡ ಸಿಎಂ ಕಾರನ್ನು ತಡೆದು ತಪಾಸಣೆ ನಡೆಸಿದೆ. ಚುನಾವಣೆ ಸಮಯದಲ್ಲಿ ಯಾವುದೇ ಅಕ್ರಮ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕಾಗುತ್ತದೆ.