Publish Date: Sat, 30 Mar 2024 (16:51 IST)
Updated Date: Sat, 30 Mar 2024 (16:53 IST)
ಬೆಂಗಳೂರು: ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ತಮ್ಮ ಮುಂದಿನ ನಡೆಯೇನು ಎಂಬ ಕುರಿತು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಏಪ್ರಿಲ್ 3 ರಂದು ಘೋಷಣೆ ಮಾಡುವುದಾಗಿ ಹೇಳಿದ್ದಾರೆ.
ಇಂದು ತಮ್ಮ ಬೆಂಬಲಿಗರ ಜೊತೆ ಸುಮಲತಾ ಸಭೆ ನಡೆಸಿದ್ದಾರೆ. ಅದಾದ ಬಳಿಕ ತಮ್ಮ ಮುಂದಿನ ನಡೆಯೇನು ಎಂಬುದನ್ನು ಘೋಷಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಮಂಡ್ಯದಿಂದ ಪಕ್ಷೇತರರಾಗಿ ಸ್ಪರ್ಧಿಸುತ್ತಾರಾ ಅಥವಾ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುತ್ತಾರಾ ಎನ್ನುವ ಬಗ್ಗೆ ಅನುಮಾನಗಳಿತ್ತು.
ತಾನು ಸ್ಪರ್ಧಿಸಿದರೆ ಮಂಡ್ಯದಿಂದಲೇ ಎಂದು ಪಟ್ಟು ಹಿಡಿದು ಕೂತಿರುವ ಸುಮಲತಾ ಪಕ್ಷೇತರರಾಗಿ ಸ್ಪರ್ಧಿಸಲು ಒಂದು ವರ್ಗದ ಬೆಂಬಲಿಗರಿಂದ ಒತ್ತಡವಿದೆ. ಒಂದು ವೇಳೆ ಪಕ್ಷೇತರರಾಗಿ ನಿಂತರೂ ಅವರ ಹಾದಿ ಅಷ್ಟು ಸುಗಮವಾಗಿಲ್ಲ. ಹೀಗಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿದ್ದರೂ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಾಗುತ್ತದೆ.
ಆದರೆ ಇಂದಿನ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ. ಅದರ ಬದಲು ಏಪ್ರಿಲ್ 3 ರಂದು ಸುಮಲತಾ ಮಂಡ್ಯದಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಲಿದ್ದು, ಅಲ್ಲಿಯೇ ತಮ್ಮ ಭವಿಷ್ಯದ ನಿರ್ಧಾರವೇನು ಎಂಬುದನ್ನು ಘೋಷಣೆ ಮಾಡಲಿದ್ದಾರೆ. ನಿಮ್ಮನ್ನು ನೋಯಿಸುವ ನಿರ್ಧಾರ ಮಾಡಲ್ಲ. ಮಂಡ್ಯದ ಋಣ ಬಿಡಲು ಸಾಧ್ಯವಿಲ್ಲ. ಅಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.