Publish Date: Sat, 30 Mar 2024 (12:19 IST)
Updated Date: Sat, 30 Mar 2024 (12:21 IST)
ಕೋಲಾರ: ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಗೊಂದಲ ಕೊನೆಗೂ ಬಗೆಹರಿದಿದೆ. ರಮೇಶ್ ಕುಮಾರ್, ಮುನಿಯಪ್ಪ ಬಣದ ನಡುವಿನ ಜಗಳದಲ್ಲಿ ಮಾಜಿ ಮೇಯರ್ ಪುತ್ರ ಕೆವಿ ಗೌತಮ್ ಲಾಭ ಪಡೆದಿದ್ದಾರೆ.
ಕೋಲಾರ ಬಿಕ್ಕಟ್ಟು ಬಗೆಹರಿಸಲು ಕಾಂಗ್ರೆಸ್ ನಾಯಕರು ಎರಡೂ ಬಣಗಳನ್ನು ಬಿಟ್ಟು ಮೂರನೆಯವರಿಗೆ ಟಿಕೆಟ್ ನೀಡಿದೆ. ಇದೀಗ ಕಾಂಗ್ರೆಸ್ ಎಲ್ಲಾ 28 ಕ್ಷೇತ್ರಗಳಿಗೆ ಸ್ಪರ್ಧಿಗಳನ್ನು ಘೋಷಿಸಿದಂತಾಗಿದೆ. ಕೋಲಾರ ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.
ಕೋಲಾರ ಲೋಕಸಭಾ ಟಿಕೆಟ್ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣನಿಗೆ ನೀಡಬೇಕು ಎಂಬುದು ಅವರ ಬಣದ ವಾದವಾಗಿತ್ತು. ಇನ್ನೊಂದೆಡೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣ ಮುನಿಯಪ್ಪ ಕಡೆಯವರಿಗೆ ಟಿಕೆಟ್ ನೀಡಿದರೆ ರಾಜೀನಾಮೆ ನೀಡುವುದಾಗಿ ಐವರು ಶಾಸಕರು ಬಂಡಾಯವೆದ್ದಿದ್ದರು.
ಈ ಬಿಕ್ಕಟ್ಟು ಬಗೆಹರಿಸಲು ಸ್ವತಃ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಎಂಟ್ರಿ ಕೊಡಬೇಕಾಯಿತು. ಇದೀಗ ಎರಡೂ ಬಣದವರನ್ನು ಬಿಟ್ಟು ಮಾಜಿ ಮೇಯರ್ ವಿಜಯ್ ಕುಮಾರ್ ಪುತ್ರ ಕೆವಿ ಗೌತಮ್ ಗೆ ಮಣೆ ಹಾಕಲಾಗಿದೆ. ಅಲ್ಲಿಗೆ ಎರಡು ಬಣದವರ ಜಗಳದಲ್ಲಿ ಗೌತಮ್ ಲಾಭ ಪಡೆದುಕೊಂಡಿದ್ದಾರೆ.