Publish Date: Wed, 18 Jul 2018 (10:35 IST)
Updated Date: Wed, 18 Jul 2018 (10:36 IST)
ನವದೆಹಲಿ: ಇಂದು ದೆಹಲಿಯಲ್ಲಿ ಕಾವೇರಿ ನದಿ ಪ್ರಾಧಿಕಾರ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ಕರೆದಿದ್ದ ಸಂಸದರ ಸಭೆಗೆ ಕಳಂಕವೊಂದು ಅಂಟಿದೆ.
ಸಿಎಂ ಸಭೆಗೆ ಆಗಮಿಸುವ ಸಂಸದರಿಗೆ ಒಂದು ಲಕ್ಷ ರೂ. ಬೆಲೆ ಬಾಳುವ ಐಫೋನ್ ಗಿಫ್ಟ್ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ರಾಜ್ಯ ಸಂಕಷ್ಟದಲ್ಲಿರುವಾಗ ದುಬಾರಿ ಗಿಫ್ಟ್ ನ ಅವಶ್ಯಕತೆ ಏನಿತ್ತು ಎಂದು ಬಿಜೆಪಿ ಸಂಸದರು ಪ್ರಶ್ನಿಸಿದ್ದಾರೆ.
ಆದರೆ ಈ ಬಗ್ಗೆ ನನಗೆ ಮಾಹಿತಿಯಿಲ್ಲ, ನಾನಂತೂ ಗಿಫ್ಟ್ ಕೊಡಲು ಸೂಚಿಸಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಸಚಿವ ಡಿಕೆ ಶಿವಕುಮಾರ್ ಈ ಗಿಫ್ಟ್ ಕೊಟ್ಟಿರುವುದು ನಾನೇ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಹೃದಯ ಶ್ರೀಮಂತಿಕೆಯಿಂದ ಸಂಸದರಿಗೆ ಉಡುಗೊರೆ ಕೊಟ್ಟಿದ್ದೇನೆ. ಕಳೆದ ವರ್ಷವೂ ಕೊಟ್ಟಿದ್ದೆ. ಸಂಸದರಿಗೆ ತ್ವರಿತವಾಗಿ ಮಾಹಿತಿ ತಲುಪಿಸಲು ಅನುಕೂಲವಾಗಲಿ ಎಂದು ಗಿಫ್ಟ್ ಕೊಟ್ಟಿದ್ದೇನೆ. ಒಳ್ಳೆಯ ಉದ್ದೇಶದಿಂದ ಕೊಟ್ಟಿದ್ದೇನೆ’ ಎಂದಿದ್ದಾರೆ.
ಈ ವಿಚಾರವೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ವಿಪಕ್ಷ ಬಿಜೆಪಿ ಸದಸ್ಯರು ತಮಗೆ ಗಿಫ್ಟ್ ಬೇಡವೆಂದು ಮರಳಿಸುತ್ತಿದ್ದಾರೆ. ಸಂಸದರು ಚರ್ಚಿಸಬೇಕಾದ ವಿಚಾರಗಳ ವಿವರಗಳಿರುವ ಕಿಟ್ ನಲ್ಲಿ ಐಫೋನ್ ಕೂಡಾ ಹಾಕಿ ಕೊಡಲಾಗಿದೆ. ಬಿಜೆಪಿಯ ಎಲ್ಲಾ ಸದಸ್ಯರು ಐಫೋನ್ ಸ್ವೀಕರಿಸದೇ ಇರಲು ತೀರ್ಮಾನಿಸಿದ್ದೇವೆ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.