Publish Date: Sat, 22 Jun 2019 (14:39 IST)
Updated Date: Sat, 22 Jun 2019 (14:41 IST)
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗ್ರಾಮವಾಸ್ತವ್ಯಕ್ಕೆ ಮತ್ತೊಂದು ವಿಘ್ನ ಎದುರಾಗಿದೆ. ಹೀಗಾಗಿ ದಿಢೀರ್ ಆಗಿ ಗ್ರಾಮ ವಾಸ್ತವ್ಯ ರದ್ದುಗೊಂಡಿದೆ.
ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಸಿಎಂ ಹಮ್ಮಿಕೊಂಡಿರುವ ಗ್ರಾಮ ವಾಸ್ತವ್ಯಕ್ಕೆ ಮತ್ತೊಂದು ವಿಘ್ನ ಎದುರಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಮೊದಲ ಗ್ರಾಮ ವಾಸ್ತವ್ಯ ನಡೆಯಿತು. ಆದರೆ ಕಲಬುರಗಿ ಜಿಲ್ಲೆಯ ಹೇರೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ರದ್ದುಗೊಂಡಿದೆ.
ಭಾರೀ ಮಳೆಯಿಂದಾಗಿ ಗ್ರಾಮ ವಾಸ್ತವ್ಯವನ್ನು ಮುಂದೂಡಲಾಗಿದೆ. ಬೃಹತ್ ವೇದಿಕೆ, ಅಗತ್ಯ ಸಿದ್ಧತೆಗಳನ್ನು ಅಧಿಕಾರಿಗಳು ಮಾಡಿಕೊಂಡಿದ್ದರು. ಆದರೂ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ವೇದಿಕೆಗೆ ಹಾನಿಯಾಗಿದೆ.
ಅಷ್ಟೇ ಅಲ್ಲ, ವೇದಿಕೆವರೆಗೂ ಮಳೆ ನೀರು ನಿಂತುಕೊಂಡಿದೆ. ವೇದಿಕೆವರೆಗೆ ನೀರನಲ್ಲಿ ಹಾಯ್ದು ಹೋಗಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮಳೆ ಕಾರಣದಿಂದ ಮನವಿ ಸಲ್ಲಿಸಲು ಬರುವ ಜನರ ಸಂಖ್ಯೆಯಲ್ಲಿಯೂ ಇಳಿಮುಖ ವಾಗುವ ಸಾಧ್ಯತೆ ಕಂಡುಬಂದಿತು.
ಇದನ್ನೆಲ್ಲ ಗಮನಿಸಿ ಹೇರೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಿಎಂ ಗ್ರಾಮ ವಾಸ್ತವ್ಯವನ್ನು ರದ್ದು ಪಡಿಸಿದ್ದು, ಮುಂದಿನ ದಿನಾಂಕ ಆ ಬಳಿಕ ತಿಳಿಸಲಾಗುವುದೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.