Publish Date: Mon, 21 Feb 2022 (18:23 IST)
Updated Date: Mon, 21 Feb 2022 (18:25 IST)
ಬೆಂಗಳೂರು: ಸಚಿವ ಕೆ.ಎಸ್ ಈಶ್ವರಪ್ಪ ಸ್ಥಳೀಯ ಜನಪ್ರತಿನಿಧಿ. ಹೀಗಾಗಿ ಅವರು ಹಾಗೆ ಹೇಳಿರಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ,ಟಿ ರವಿ ಸಮರ್ಥನೆ ಮಾಡಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ನಡೆದ ಕೊಲೆ ಖಂಡನೀಯ. ಆದಷ್ಟೂ ಶೀಘ್ರವಾಗಿ ಕೊಲೆ ಮಾಡಿದವರನ್ನು ಬಂಧಿಸಬೇಕು. ಅವರು ಸ್ಥಳೀಯ ಜನ ಪ್ರತಿನಿಧಿ. ಹೀಗಾಗಿ ಈಶ್ವರಪ್ಪ ಅವರು ಮುಸ್ಲಿಂ ಗೂಂಡಾಗಳು ಕೊಲೆ ಮಾಡಿದ್ದಾರೆ ಎಂದು ಹೇಳಿರಬಹುದು ಎಂದು ತಿಳಿಸಿದ್ದಾರೆ.
ನಿನ್ನೆ ರಾತ್ರಿ ಸಕ್ರಿಯವಾಗಿದ್ದ ಕಾರ್ಯಕರ್ತ ಹರ್ಷನ ಕೊಲೆ ಮಾಡಿದ್ದಾರೆ. ಕೊಲೆಗೆ ಕಾರಣರಾದವರ ಬಂಧನ ಆಗಬೇಕು. ಇದು ಮೇಲ್ನೋಟಕ್ಕೆ ಪೂರ್ವಯೋಜಿತ ಕೊಲೆ ಥರ ಕಾಣ್ತಿದೆ. ತನಿಖೆಗೂ ಮುನ್ನ ನಾನು ಏನೂ ಹೇಳಲ್ಲ. ಕೊಲೆಗೆ ಕಾರಣ ಗೊತ್ತಾಗಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ರಾಜ್ಯದಲ್ಲಿ ಹಿಜಬ್ ವಿವಾದ ಸಂಬಂಧ ಪ್ರತಿಕ್ರಿಯಿಸಿ, ಹಿಜಬ್ ಬೇಕೋ ಬೇಡವೋ ಅನ್ನೋದು ಈಗ ಪ್ರಶ್ನೆ ಅಲ್ಲ. ಸಮವಸ್ತ್ರ ಬೇಕೋ ಬೇಡವೋ ಅನ್ನೋದು ಪ್ರಶ್ನೆ. ಇದನ್ನು ನಾನು ಬುದ್ಧಿಜೀವಿಗಳಿಗೆ ಕೇಳಲು ಬಯಸುತ್ತೇನೆ ಎಂದು ಹೇಳಿದರು.