Publish Date: Thu, 29 Aug 2024 (16:30 IST)
Updated Date: Thu, 29 Aug 2024 (16:34 IST)
ಹಾಸನ: ಬೆಳಿಗ್ಗೆಯಿಂದ ಟಿವಿಯಲ್ಲಿ ನಟ ದರ್ಶನ್ ಒಬ್ಬನನ್ನೇ ತೋರಿಸ್ತಾ ಇದ್ದೀರಿ. ದೇಶದಲ್ಲಿ ಬೇರೇನೂ ಇಲ್ವಾ. ಆತ ಸಮಾಜಕ್ಕೆ ಏನ್ ಒಳ್ಳೆಯ ಕೆಲಸ ಮಾಡಿದ್ದಾನೆಂದು ಆ ರೀತಿ ತೋರಿಸ್ತಾ ಇದ್ದೀರಿ. ಆತ ಒಳ್ಳೆಯ ನಟ ಎಂದು ಒಪ್ಪಿಕೊಳ್ಳುವ, ಆದರೆ ಆ ಕಲಾವಿದ ಮಾಡಬಾರದನ್ನು ಮಾಡಿದರೆ ಕಾನೂನು ಕ್ರಮ ತಗೊಳುತ್ತೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ ಅವರು ಗರಂ ಆಗಿದ್ದಾರೆ.
ವಿಐಪಿ ಟ್ರೀಟ್ಮೆಂಟ್ ಹಿನ್ನೆಲೆ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಅವರನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಈ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ದರ್ಶನ್ ಒಬ್ಬರದ್ದೇ ನ್ಯೂಸ್ ಇರೋದಾ, ಬೆಳಿಗ್ಗೆ ಎಂದಾಕ್ಷಣದಿಂದ ಟಿವಿಯಲ್ಲಿ ದರ್ಶನ್ ಮುಖ ಮಾತ್ರ ಬರ್ತಿದೆ, ಅದನ್ನೇ ನೋಡಲು ಅಸಹ್ಯವಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ಗೆ ಪರಪ್ಪನ ಅಗ್ರಹಾರದಲ್ಲಿ ವಿಐಪಿ ಟ್ರೀಟ್ಮೆಂಟ್ ನೀಡುತ್ತಿರುವ ಪೋಟೋ, ಹಾಗೂ ಕೈದಿಯೊಬ್ಬನ ಬಳಿ ವಿಡಿಯೋ ಕಾಲ್ನಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗಿದ್ದು. ಅದಲ್ಲದೆ ಸುದ್ದಿ ವಾಹಿನಿಗಳಲ್ಲಿ ಈ ವಿಚಾರ ಬಾರೀ ಚರ್ಚೆಗೆ ಕಾರಣವಾದ ಬೆನ್ನಲ್ಲೇ ಎಚ್ಚೆತ್ತಾ ರಾಜ್ಯ ಸರ್ಕಾರ ಸೂಕ್ತ ಕ್ರಮಕ್ಕೆ ಸೂಚಿಸಿತ್ತು. ಅದರಂತೆ ಇಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ನಟ ದರ್ಶನ್ ಅವರನ್ನು ಇಂದು ಬಳ್ಳಾರಿ ಜೈಲಿಗೆ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಶಿಫ್ಟ್ ಮಾಡಲಾಯಿತು.