ಬೆಂಗಳೂರು: ಜಾತಿ ಜನಗಣತಿ ಎಂಬುದೇ ಗೊಂದಲದ ಗೂಡಾಗಿದೆ. ಇದು ಜಾತಿ ಜಾತಿಗಳನ್ನು ಒಡೆಯುವ ಸಮೀಕ್ಷೆಯಂತೂ ಹೌದು; ಇದಕ್ಕೆ ಸಿಎಂ ಹೇಳಿಕೆಗೆಳೂ ಪುಷ್ಟಿ ಕೊಡುತ್ತಿವೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಜಾತಿಗಳನ್ನು ಇವರು ಒಡೆಯುತ್ತಿದ್ದಾರೆ ಎಂಬುದು ಬಹುಜನರ ಮಾತು. ಜಾತಿ ಸಮೀಕ್ಷೆ ಗೊಂದಲ ವಿಚಾರದಲ್ಲಿ ಸರ್ಕಾರದಲ್ಲೇ ಸಮೀಕ್ಷೆಯ ಪ್ರಶ್ನೆಗಳಿಗೆ ಆಕ್ಷೇಪ ಇದೆ; ಒಟ್ಟಾರೆ ಸರ್ಕಾರದ ಒಪ್ಪಿಗೆ ಇತ್ತಾ ಇಲ್ಲವೇ ಅನ್ನೋದು ಸ್ಪಷ್ಟ ಆಗಬೇಕು ಎಂದು ಆಗ್ರಹಿಸಿದರು.
ಕೆಲವರು ಧರ್ಮದ ಕಾಲಂನಲ್ಲಿ ಲಿಂಗಾಯತ ಧರ್ಮದ ಹೆಸರು ಮಾತಾಡುತ್ತಿದ್ದಾರೆ. ಇದನ್ನು ಸಿಎಂ ನಿರ್ಧಾರ ಮಾಡಲ್ಲ, ಆ ಸಮುದಾಯದವರೂ ತೀರ್ಮಾನ ಮಾಡಲಾಗದು. ಲಿಂಗಾಯತ ಪ್ರತ್ಯೇಕ ಧರ್ಮದ ಹೇಳಿಕೆಗಳ ವಿಚಾರದ ಕುರಿತು ಮಾತನಾಡಿ, ಸಿದ್ದರಾಮಯ್ಯ ರಾಜ್ಯಕ್ಕೆ ಸಿಎಂ, ನಮ್ಮೆಲ್ಲರ ಸಿಎಂ. ಆದರೆ, ಒಂದು ಧರ್ಮದ ಬಗ್ಗೆ ತೀರ್ಮಾನಿಸುವ ಹಕ್ಕು ಸಿಎಂಗೆ ಇಲ್ಲ ಎಂದು ಹೇಳಿದರು.
ಅದನ್ನು ಸಮುದಾಯಕ್ಕೆ ಸಂಬಂಧಿಸಿದ ಮಠಾಧೀಶರು ತೀರ್ಮಾನ ತೆಗೆದುಕೊಳ್ಳಬಹುದು. ಸಮುದಾಯಕ್ಕೆ ಸಂಬಂಧಪಡದವರು ತೀರ್ಮಾನ ತೆಗದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
ನೆಲಮಂಗಲದಲ್ಲಿ ಸಾವಿರಾರು ಪಡಿತರ ಕಾರ್ಡ್ ಗಳ ರದ್ದು ಬಗ್ಗೆ ನೊಟೀಸ್ ವಿಚಾರದ ಪ್ರಶ್ನೆಗೆ ಉತ್ತರಿಸಿದ ಅವರು, ಹಳ್ಳಿಗಾಡಿನಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಇರೋರೆಲ್ಲ ಬಹುತೇಕ ಬಡವರು; ನೋಟಿಸ್ ಕೊಡಲು ಆದಾಯ ಮಿತಿ ಬಗ್ಗೆ ಸರ್ಕಾರದ ಬಳಿ ದಾಖಲೆ ಇದೆಯೇ? ಎಂದು ಕೇಳಿದರು.
ಸರ್ಕಾರವು ಜನರನ್ನು ದಿಕ್ಕು ತಪ್ಪಿಸುವ, ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ ಎಂದು ಆಕ್ಷೇಪಿಸಿದರು. ಇದು ಬಡವರಿಗೆ ಮೋಸ ಮಾಡುವ ಸರ್ಕಾರ. ಇದು ಜನರಿಗೆ ಈ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ದೊಡ್ಡ ದ್ರೋಹವಾಗಿದೆ. ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ನಮ್ಮ ಮೆಟ್ರೋಗೆ ಬಸವ ಮೆಟ್ರೋ ಹೆಸರಿಡಲು ಒತ್ತಾಯ ವಿಚಾರದ ಕುರಿತು ಮಾತನಾಡಿ, ಕೆಲವರು ಅವರವರ ಇಚ್ಛೆಗನುಸಾರ ಒತ್ತಾಯ ಮಾಡುತ್ತಾರೆ. ಮೆಟ್ರೋಗೆ ಅಂಬೇಡ್ಕರ್, ಬಸವಣ್ಣ ಹೀಗೆ ಸಮಾಜಕ್ಕೆ ಒಳಿತು ಮಾಡಿದವರ ಹೆಸರು ಇಡಲಿ ಎಂದು ನುಡಿದರು. ಕೆಲವರು ಡಾ.ಅಂಬೇಡ್ಕರ್ ಹೆಸರು ಬೇಕು, ಬಸವೇಶ್ವರರ ಹೆಸರು ಬೇಕು, ಕೆಂಪೇಗೌಡರ ಹೆಸರು ಬೇಕು ಅಂತ ಕೇಳುತ್ತಾರೆ. ಅದನ್ನು ಸರ್ಕಾರವೇ ನಿರ್ಧಾರ ಮಾಡಬೇಕು ಎಂದು ತಿಳಿಸಿದರು.