Publish Date: Sun, 05 Oct 2025 (13:46 IST)
Updated Date: Sun, 05 Oct 2025 (13:49 IST)
ಬೆಂಗಳೂರು: ಜಾತಿಗಣತಿಗೆಂದು ಹೋಗುವ ಸಮೀಕ್ಷಕರು ಬೆಂಗಳೂರಿಗರಿಗೆ ಕುರಿ ಎಷ್ಟಿದೆ, ಕೋಳಿ ಎಷ್ಟಿದೆ ಎಂಬಿತ್ಯಾದಿ ಪ್ರಶ್ನೆಗಳನ್ನೆಲ್ಲಾ ಕೇಳಬೇಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಖಡಕ್ ಸೂಚನೆ ಕೊಟ್ಟಿದ್ದಾರೆ.
ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಅಧಿಕಾರಿಗಳು ಬಂದು ಸಮೀಕ್ಷೆ ನಡೆಸಿದ್ದರು. ಈ ವೇಳೆ ಅವರಿಗೆ ಈ ರೀತಿಯ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಅವರು ಅಲ್ಲಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ಚಿನ್ನ ಎಷ್ಟಿದೆ ಎಂದು ಕೇಳಿದಾಗ ಅದೆಲ್ಲಾ ಪರ್ಸನಲ್ ಎಂದು ಉತ್ತರಿಸಲು ನಿರಾಕರಿಸಿದ್ದರು.
ಬಿಜೆಪಿ ಕೂಡಾ ಇದೇ ವಿಚಾರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅನಗತ್ಯ ಪ್ರಶ್ನೆಗಳನ್ನು ಕೇಳಿ ಸಮೀಕ್ಷೆ ಗೊಂದಲದ ಗೂಡಾಗಿದೆ ಎಂದು ಟೀಕಿಸುತ್ತಿದೆ. ಇದರ ಬೆನ್ನಲ್ಲೇ ಡಿಕೆಶಿ ಅನಗತ್ಯ ಪ್ರಶ್ನೆ ಕೇಳದಂತೆ ಸೂಚನೆ ನೀಡಿದ್ದಾರೆ.
ಬೆಂಗಳೂರಿಗರಿಗೆ ಕುರಿ ಎಷ್ಟಿದೆ, ಕೋಳಿ ಎಷ್ಟಿದೆ ಎಂಬೆಲ್ಲಾ ಪ್ರಶ್ನೆಗಳು ಅನಗತ್ಯ. ಅಂತಹ ಪ್ರಶ್ನೆಗಳನ್ನು ಕೇಳಬೇಡಿ. ಇನ್ನು, ಚಿನ್ನ ಎಷ್ಟಿದೆ, ಫ್ರಿಡ್ಜ್ ಎಷ್ಟಿದೆ, ವಾಚ್ ಎಷ್ಟಿದೆ ಎನ್ನುವುದೆಲ್ಲಾ ಅವರವರ ಪರ್ಸನಲ್. ಇಂತಹ ಪ್ರಶ್ನೆಗಳನ್ನು ಕೇಳಬೇಡಿ. ಇದಕ್ಕೆಲ್ಲಾ ಉತ್ತರ ಕೊಡಬೇಕಾದ ಅಗತ್ಯವಿಲ್ಲ. ಜಾತಿ ಸಮೀಕ್ಷೆ ಮಾಡುವುದು ಅಗತ್ಯ. ಆದರೆ ಅನಗತ್ಯ ಪ್ರಶ್ನೆಗಳನ್ನು ಕೇಳಬೇಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.