Publish Date: Wed, 27 Sep 2023 (20:31 IST)
Updated Date: Wed, 27 Sep 2023 (19:35 IST)
ರಾಜ್ಯ ಸರ್ಕಾರದ ಬೇಜವಾಬ್ದಾರಿಯಿಂದಾಗಿ ಕಾವೇರಿ ಸಮಸ್ಯೆ ಉದ್ಭವವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ನಾಯಕರು ಅವರವರ ಹೊಡೆದಾಟದಲ್ಲಿ ಮುಳುಗಿರಬೇಕು. ತಮಿಳುನಾಡನ್ನು ಓಲೈಸಿಕೊಳ್ಳಲು ಮುಂದಾಗಿರಬೇಕು, ಸರಿಯಾಗಿ ಕಾವೇರಿ ಕೊಳ್ಳದ ಸಮಸ್ಯೆ ಅಧ್ಯಯನ ಮಾಡದೇ ಇರಬಹುದು. ಈ ಕಾರಣದಿಂದಲೇ ಸರ್ಕಾರ ಪ್ರಾಧಿಕಾರಕ್ಕೆ ಸೂಕ್ತ ಮಾಹಿತಿ ನೀಡಿಲ್ಲ. ನ್ಯಾಯಾಲಯಕ್ಕೆ ಅಂಕಿ ಅಂಶ ನೀಡಿಲ್ಲ. ಇದರ ಬದಲು ಪ್ರಧಾನಿಯನ್ನು ದೂರುವ ಕೆಲಸ ಮಾಡುತ್ತಿದ್ದಾರೆ ಎಂದು ಖಂಡಿಸಿದರು. ನಾನು ಸಿಎಂ, ಡಿಸಿಎಂ ದೆಹಲಿಗೆ ಬಂದಾಗಲೂ ಇದನ್ನೇ ಕೇಳಿದ್ದೆ. ಯಾಕೆ ನೀವು ಸರಿಯಾದ ಮಾಹಿತಿಯನ್ನು ನ್ಯಾಯಾಲಯ ಹಾಗೂ ಪ್ರಾಧಿಕಾರಕ್ಕೆ ಕೊಟ್ಟಿಲ್ಲ ಎಂದು ಕೇಳಿದ್ದೆ. ದೆಹಲಿಯಿಂದ ತಮಿಳುನಾಡು, ಕರ್ನಾಟಕಕ್ಕೆ ನಿಯೋಗ ಕಳುಹಿಸಿಲು ನಾವು ಮನವಿ ಮಾಡಿದ್ದೇವೆ. ಕೇಂದ್ರ ಜಲ ಸಂಪನ್ಮೂಲ ಸಚಿವರಿಗೆ ಮನವಿ ಮಾಡಿದ್ದೇವೆ ಎಂದರು.