Select Your Language

Notifications

webdunia
webdunia
webdunia
webdunia

ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ರದ್ದು ಮಾಡಿ: ಡಿ.ಕೆ. ಶಿವಕುಮಾರ್ ಆಗ್ರಹ

ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ರದ್ದು ಮಾಡಿ: ಡಿ.ಕೆ. ಶಿವಕುಮಾರ್ ಆಗ್ರಹ
bangalore , ಸೋಮವಾರ, 30 ಮೇ 2022 (20:06 IST)
ಶಾಲಾ ಪಠ್ಯಪುಸ್ತಕದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿರುವ, ರಾಷ್ಟ್ರಕವಿ ಕುವೆಂಪು ಹಾಗೂ ನಾಡಗೀತೆಗೆ ಅಪಮಾನ ಮಾಡಿರುವ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿಯನ್ನು ಕೂಡಲೇ ರದ್ದುಗೊಳಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
 
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದ್ದಿಷ್ಟು;
 
‘ಶಿಕ್ಷಣ ಸಚಿವ ನಾಗೇಶ್ ಹಾಗೂ ಬಿಜೆಪಿ ಸರ್ಕಾರ ಪಠ್ಯ ಪುಸ್ತಕ ವಿಚಾರವಾಗಿ ರಾಜ್ಯದಲ್ಲಿ ಗೊಂದಲ ನಿರ್ಮಾಣ ಮಾಡುತ್ತಿದ್ದು, ಇತಿಹಾಸವನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಯಾವುದೇ ಸಮಿತಿಯ ಅಧ್ಯಕ್ಷರಾದವರು ತಮ್ಮದೇ ಆದ ವರ್ಚಸ್ಸು ಇಟ್ಟುಕೊಂಡಿರಬೇಕು. ಆದರೆ ಆ ವ್ಯಕ್ತಿಗೆ ಕನ್ನಡ ಭಾಷೆ, ಬಾವುಟದ ಬಗ್ಗೆಯೇ ಗೌರವವಿಲ್ಲ. ರಾಷ್ಟ್ರಕವಿ ಕುವೆಂಪು ಅವರ ಆಚಾರ, ವಿಚಾರವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಒಪ್ಪಿ, ಅವರಿಗೆ ಎಲ್ಲ ರೀತಿಯ ಗೌರವಗಳನ್ನು ನೀಡಿವೆ. ಅವರ ನಾಡಗೀತೆ ಮೂಲಕ ನಾವು ನಮ್ಮ ನಾಡಿನ ಬಗ್ಗೆ ಮುಂದಿನ ಪೀಳಿಗೆಗೆ ಮನದಟ್ಟು ಮಾಡಿಕೊಡುತ್ತಿದ್ದೇವೆ. ಅಂತಹವರ ಬಗ್ಗೆ ಈ ವ್ಯಕ್ತಿ ಅವಹೇಳನಕಾರಿ ಮಾತಾಡಿರುವುದು ಖಂಡನೀಯ.
 
ಕುವೆಂಪು ಅವರ ಬಗ್ಗೆ ಕನಿಷ್ಠ ಪ್ರೀತಿ, ಗೌರವ ಇಟ್ಟುಕೊಂಡಿರಬೇಕು. ನಮ್ಮ ರಾಜ್ಯದ ಕವಿಗಳಿಗೆ ಅಪಮಾನ ಮಾಡಿರುವುದು
ಹಾಗೂ ರಾಜ್ಯದ ಇತಿಹಾಸವನ್ನು ತಿರುಚುತ್ತಿರುವುದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಈ ರಾಜ್ಯದ ಸಾಹಿತಿಗಳು, ಸಂಘಟನೆಗಳು, ಶಿಕ್ಷಕರು, ವಿದ್ಯಾರ್ಥಿಗಳು ಈ ವಿಚಾರವಾಗಿ ಧ್ವನಿ ಎತ್ತಬೇಕು ಎಂದು ಮನವಿ ಮಾಡುತ್ತೇನೆ. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯನ್ನು ಕೂಡಲೇ ರದ್ದು ಮಾಡಿ, ಈ ಹಿಂದಿನ ವರ್ಷಗಳಲ್ಲಿ ಇದ್ದ ಪಠ್ಯವನ್ನೇ ಯಾವುದೇ ಬದಲಾವಣೆ ಮಾಡದೇ ಈ ವರ್ಷವೂ ಮುಂದುವರಿಸಿಕೊಂಡು ಹೋಗಬೇಕು. 
 
ಈ ಹಿಂದೆ ಇದ್ದ ಪಠ್ಯ ಪುಸ್ತಕಗಳನ್ನು ಓದಿಕೊಂಡೆ ಅನೇಕರು ವಿದ್ಯಾವಂತರಾಗಿದ್ದಾರೆ. ನಮಗೆ ಜ್ಞಾನ, ಮಾತನಾಡುವ ಶಕ್ತಿಯನ್ನು ಕೊಟ್ಟಿರುವ, ಹಿರಿಯರ ಮಾರ್ಗದರ್ಶನ ಹೊಂದಿರುವ ಪಠ್ಯ ಪುಸ್ತಕವನ್ನು ಬದಲಿಸಲು ಮುಂದಾಗಿರುವುದು ಅಕ್ಷಮ್ಯ. ನೀವು ಇಷ್ಟು ಪ್ರಮಾಣದಲ್ಲಿ ಮಾತನಾಡಲು ಶಕ್ತಿ ಕೊಟ್ಟಿರುವುದು ಇದೇ ಪಠ್ಯ ಪುಸ್ತಕಗಳಲ್ಲವೇ? ಇದನ್ನು ಯಾವ ಕಾರಣಕ್ಕೆ ಬದಲಿಸಲು ಪ್ರಯತ್ನಿಸುತ್ತಿದ್ದೀರಿ. ಇವರ ಈ ಪ್ರಯತ್ನ ನೋಡಿದರೆ ನಮ್ಮ ಇತಿಹಾಸದ ಬಗ್ಗೆ ನಮಗೆ ಅನುಮಾನ ಮೂಡುವಂತೆ ಮಾಡುತ್ತಿದೆ. ಹೀಗಾಗಿ ಪಠ್ಯ ಬದಲಿಸುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸುತ್ತೇನೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೂನ್ 1 ರಿಂದ ನು ನೈರುತ್ಯ ಮುಂಗಾರು ಆರಂಭ