Publish Date: Sat, 14 Sep 2019 (15:38 IST)
Updated Date: Sat, 14 Sep 2019 (15:41 IST)
ಮಲಪ್ರಭಾ, ಘಟಪ್ರಭಾ ಹಾಗೂ ಕೃಷ್ಣಾ ನದಿಗಳ ಪ್ರವಾಹದಿಂದ ಮನೆ, ಬೆಳೆ ಮತ್ತು ಜಾನುವಾರುಗಳನ್ನು ಕಳೆದುಕೊಂಡು ನಿರಾಶ್ರಿತರಾದ ರೈತರಿಗೆ ಹಾಗೂ ಬಡವರಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಅಹೋರಾತ್ರಿ ಧರಣಿ ಕೈಗೊಳ್ಳಲಾಗುತ್ತಿದೆ.
ಸೆಪ್ಟೆಂಬರ್ 16ರಂದು ಅನಿರ್ಧಿಷ್ಟ ಅಹೋರಾತ್ರಿ ಧರಣಿಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ರೈತ ಮುಖಂಡ ಚೂನಪ್ಪಾ ಹೇಳಿದ್ದಾರೆ.
ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನದಿಗಳ ಪ್ರವಾಹದಿಂದ ಉತ್ತರ ಕರ್ನಾಟಕದಲ್ಲಿ ಬೆಳೆ, ಮನೆಗಳು ನಾಶವಾಗಿದ್ದು ಜಾನುವಾರುಗಳು ಕೊಚ್ಚಿಕೊಂಡು ಹೋಗಿವೆ. ಸರಕಾರದಿಂದ ಸೂಕ್ತ ಪರಿಹಾರ ಸಿಗುತ್ತಿಲ್ಲ. ಕೂಡಲೇ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕನ್ನಡಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ್ 16ರಂದು ಧರಣಿ ಆರಂಭಿಸಲಾಗುತ್ತಿದೆ.
ಕೋಟೆಕೆರಿಯಿಂದ ಪಾದಯಾತ್ರೆ ಮುಖಾಂತರ ತೆರಳಿ ಚೆನ್ನಮ್ಮನ ಪುತ್ತಳಿಗೆ ಮಾಲಾರ್ಪಣೆ ಮಾಡಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಅನಿರ್ಧಿಷ್ಟಾವದಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುತ್ತದೆ ಎಂದರು. ಹಾನಿಗೊಳಗಾದ ಕಬ್ಬಿಗೆ 1.50 ಲಕ್ಷ ಮತ್ತು ಇತರ ಬೆಳೆಗೆ 1 ಲಕ್ಷ ಪರಿಹಾರ ನೀಡಬೇಕು.
ಪ್ರಾಣಹಾನಿಯಾದ ಜಾನುವಾರುಗಳಿಗೆ 80 ಸಾವಿರ ಮತ್ತು ಮನೆಗಳ ನಿರ್ಮಾಣಕ್ಕೆ 15 ಲಕ್ಷ ಪರಿಹಾರ ಧನ ಕೊಡಬೇಕು ಮತ್ತು ಬೆಳೆಸಾಲ, ಹೈನುಗಾರಿಕೆ ಸಾಲ, ಅಭಿವೃದ್ಧಿ ಸಾಲ, ಟ್ರ್ಯಾಕ್ಟರ್ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬಂದು ಸಮಸ್ಯೆಗೆ ಸ್ಪಂದಿಸುವವರೆಗೂ ಧರಣಿ ಮುಂದುವರೆಸಲಾಗುತ್ತದೆ ಎಂದ್ರು.