ಬೆಂಗಳೂರು: ಕಲಬುರಗಿಯ ಸೇಡಂ ತಾಲೂಕಿನ ಗ್ರಂಥಾಲಯ ಮೇಲ್ವಿಚಾರಕಿ ಸಂಬಳವಿಲ್ಲದೇ ಆರ್ಥಿಕ ಸಂಕಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದು ಪ್ರಿಯಾಂಕ್ ಖರ್ಗೆಗೆ ಇದೆಲ್ಲಾ ಕಾಣಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಸಂಬಳ ಸಿಗದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಗ್ರಂಥಾಲಯ ಮೇಲ್ವಿಚಾರಕಿ ಅರಿವು ಕೇಂದ್ರದಲ್ಲೇ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಆಕೆಗೆ ಕೇವಲ 40 ವರ್ಷ ವಯಸ್ಸಾಗಿತ್ತು. ಘಟನೆ ಬಗ್ಗೆ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೇತನವಿಲ್ಲದೇ ತೀವ್ರ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಗ್ರಂಥಪಾಲಕಿ ಭಾಗ್ಯವತಿ ವಿಶ್ವೇಶ್ವರಯ್ಯ ಅಗ್ಗಿಮಠ ಅವರ ಸಾವು ಕಾಂಗ್ರೆಸ್ ಸರ್ಕಾರದ ದಿವಾಳಿತನ ಹಾಗೂ ಹೃದಯ ಹೀನ ವ್ಯವಸ್ಥೆಯನ್ನು ಅನಾವರಣಗೊಳಿಸಿದೆ. ಭಾಗ್ಯವತಿ ಅಗ್ಗಿಮಠ ಅವರ ದುರಂತ ಅಂತ್ಯ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.
ರಾಜ್ಯದ ನಿರ್ದಯಿ ಸರ್ಕಾರ ತನ್ನ ನೌಕರರಿಗೆ ಸಂಬಳ ಕೊಡದ ಸ್ಥಿತಿಗೆ ತಲುಪಿ ಸಂಬಳವನ್ನೇ ನೆಚ್ಚಿಕೊಂಡು ಬದುಕು ನಡೆಸುವ ನೌಕರರ ಪಾಲಿಗೆ ಕಂಟಕಪ್ರಾಯವಾಗಿದೆ. ಸರ್ಕಾರದ ಈ ನಡೆ ಅತ್ಯಂತ ಖಂಡನೀಯ. ಮೃತ ಭಾಗ್ಯವತಿ ಅಗ್ಗಿಮಠ ಅವರ ಕುಟುಂಬ ಅತ್ಯಂತ ಸಂಕಷ್ಟದಲ್ಲಿದ್ದು ಈ ಕೂಡಲೇ ಸೂಕ್ತ ಪರಿಹಾರ ಹಾಗೂ ಒಬ್ಬರಿಗೆ ನೌಕರಿ ನೀಡುವ ಮೂಲಕ ಮೃತರ ಅವಲಂಬಿತ ಮಕ್ಕಳ ನೆರವಿಗೆ ಬಂದು ಸರ್ಕಾರ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ.
ಮುಖ್ಯಮಂತ್ರಿಗಳಿಂದ ಹಿಡಿದು ಇತರ ಮಂತ್ರಿಗಳು ಹಾಗೂ ಅಧಿಕಾರಿಗಳು ಜನರ, ರೈತರ, ಸಮಸ್ಯೆಗಳಿಗೆ ಸ್ಪಂದಿಸದೆ, ವಿಮುಖರಾಗಿ ಅಧಿಕಾರ ರಾಜಕಾರಣದತ್ತ ತಮ್ಮ ಸಂಪೂರ್ಣ ಸಮಯವನ್ನು ಕೇಂದ್ರೀಕರಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಜಿಲ್ಲೆಯ ಸ್ಥಿತಿ ಏನಾಗಿದೆ ಎಂದು ತಿಳಿದುಕೊಳ್ಳುವ ವ್ಯವಧಾನ ತೋರುತ್ತಿಲ್ಲ , ಬಡವರ ಗೋಳು ಆಲಿಸುತ್ತಿಲ್ಲ.
ನಿರ್ಲಕ್ಷ್ಯ, ಉಡಾಫೆ ಧೋರಣೆ ಕೈಸರ್ಕಾರದ ಆಡಳಿತ ವೈಖರಿ ಎನ್ನುವುದಕ್ಕೆ ಗ್ರಂಥಪಾಲಕಿ ಭಾಗ್ಯವತಿ ವಿಶ್ವೇಶ್ವರಯ್ಯ ಅಗ್ಗಿಮಠ ಅವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಸಾಕ್ಷಿ ಒದಗಿಸಿದೆ ಎಂದು ಕಿಡಿ ಕಾರಿದ್ದಾರೆ.