Select Your Language

Notifications

webdunia
webdunia
webdunia
webdunia

ರಾಜು ಕಾಗೆಯೇ ಕಾಂಗ್ರೆಸ್ ನ ಭ್ರಷ್ಟಾಚಾರ ಬಯಲು ಮಾಡಿದ್ದಾರೆ: ಬಿವೈ ವಿಜಯೇಂದ್ರ

BY Vijayendra

Krishnaveni K

ಬೆಂಗಳೂರು , ಸೋಮವಾರ, 23 ಜೂನ್ 2025 (16:42 IST)
ಬೆಂಗಳೂರು: ಸರ್ಕಾರದ ವಿರುದ್ಧವೇ ಸಿಡಿದೆದ್ದಿರುವ ರಾಜು ಕಾಗೆ ಮತ್ತು ಬಿಆರ್ ಪಾಟೀಲ್ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.

ಈ ಬಗ್ಗೆ ಎಕ್ಸ್ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಅವರು ರಾಜ್ಯಪಾಲರು ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ. ‘ಭ್ರಷ್ಟತೆ-ಲೂಟಿಕೋರತನ’ ಕಾಂಗ್ರೆಸ್ ಆಡಳಿತದ ಅವಿಭಾಜ್ಯ ಅಂಗವಾಗಿದೆ, ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕ ರಾಜು ಕಾಗೆ ವಾಸ್ತವ ಸ್ಥಿತಿಯನ್ನು ವಿವರಿಸಿ ಆಕ್ರೋಶ ವ್ಯಕ್ತಪಡಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿಬಂದಿರುವ ದುಸ್ಥಿತಿಯನ್ನು ವಿವರಿಸಿದ್ದಾರೆ. ಆಳಂದ ಶಾಸಕ ಬಿ.ಆರ್.ಪಾಟೀಲ್ ಅವರು ಬಡವರ ಮನೆ ಮಂಜೂರಾತಿಗೂ ಲಂಚ ನೀಡಬೇಕಾದ ಪರಿಸ್ಥಿತಿಯನ್ನು ವಿವರಿಸಿ ಸರ್ಕಾರದ ಮುಖಕ್ಕೆ ಮಂಗಳಾರತಿ ಎತ್ತಿದ್ದಾರೆ. ಸರ್ಕಾರದ ಕಚೇರಿಗಳಲ್ಲಿ ದರ ಹಾಗೂ ಪರ್ಸೆಂಟೇಜ್ ನಿಗದಿಪಡಿಸಿ ವಸೂಲಿ ಮಾಡಲಾಗುತ್ತಿರುವ ಪರಿಸ್ಥಿತಿಯನ್ನು ಸ್ವತಃ ಕಂದಾಯ ಸಚಿವರೇ ಅನಾವರಣಗೊಳಿಸಿದ್ದಾರೆ’ ಎಂದಿದ್ದಾರೆ.

‘ಕಾಂಗ್ರೆಸ್ ಆಡಳಿತ ರಾಜ್ಯಕ್ಕೆ ಶಾಪಗ್ರಸ್ತವಾಗಿ ಕಾಡುತ್ತಿದೆ, ಭಾರತೀಯ ಜನತಾ ಪಾರ್ಟಿಯ ಹೋರಾಟ, ಜನಾಕ್ರೋಶ ಯಾತ್ರೆಯ ಕುರಿತು ಹಗುರವಾಗಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಕಾಂಗ್ರೆಸ್ ಶಾಸಕರೇ ಇದೀಗ ಉತ್ತರ ಕೊಡುತ್ತಿದ್ದಾರೆ. ಒಂದು ಕಡೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಶೀತಲ ಸಮರ ನಡೆಯುತ್ತಿದ್ದರೆ, ಮತ್ತೊಂದು ಕಡೆ ಅಭಿವೃದ್ಧಿ ಶೂನ್ಯತೆಯಿಂದ ಭ್ರಷ್ಟತೆಯ ಕೂಪದಲ್ಲಿ ಮುಳುಗಿರುವ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರೇ ಸಿಡಿದೆದ್ದು ನಿಂತಿದ್ದಾರೆ, ಇದರ ನಡುವೆ ಜನಸಾಮಾನ್ಯರ ಸ್ಥಿತಿ ಅಸಹನೀಯವಾಗಿದೆ, ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತ್ತಿದೆ ಎನ್ನುವ ಚಿತ್ರಣ ಸ್ಪಷ್ಟವಾಗಿದೆ’ ಎಂದು  ವಿಜಯೇಂದ್ರ ವ್ಯಂಗ್ಯ ಮಾಡಿದ್ದಾರೆ.

‘ವಿಧಾನಸಭಾ ಕ್ಷೇತ್ರವಾರು ಪ್ರತಿಯೊಂದು ಸರ್ಕಾರಿ ಕೆಲಸಕ್ಕೂ ಜನರು ಲಂಚ ನೀಡಬೇಕಾದ ಪರಿಸ್ಥಿತಿಯಿತ್ತು, ಈಗ ಶಾಸಕರನ್ನೂ ಲಂಚದ ಭೂತ ಆವರಿಸಿ ಬಿಟ್ಟಿದೆ ಎಂಬುದನ್ನು ಶಾಸಕರಾದ ಬಿ.ಆರ್.ಪಾಟೀಲ್ ಹಾಗೂ ರಾಜು ಕಾಗೆ ಸಾಕ್ಷೀಕರಿಸಿದ್ದಾರೆ. ಅನುದಾನವಿಲ್ಲದೆ, ಜನರ ಸಮಸ್ಯೆಗಳನ್ನು ನೀಗಿಸಲಾಗದೆ ಕಾಂಗ್ರೆಸ್ ಶಾಸಕರು ಹತಾಶೆಯ ಹಂತ ತಲುಪಿದ್ದಾರೆ. ಶಾಸಕರ ಸಂಯಮದ ಕಟ್ಟೆಯೊಡೆಯಲು ಆರಂಭವಾಗಿದೆ, ಬಿ.ಆರ್.ಪಾಟೀಲ್, ರಾಜು ಕಾಗೆ ಅವರ ಸಾಲಿನಲ್ಲಿ ಬಹುತೇಕ ಕಾಂಗ್ರೆಸ್ ಶಾಸಕರು ನಿಂತಿದ್ದಾರೆ. ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವ್ಯವಸ್ಥೆಯ ಭ್ರಷ್ಟತೆ ಹಾಗೂ ಲೂಟಿಕೋರತನದಿಂದ ಬೇಸತ್ತು ಅಸಹಾಯಕ ಪರಿಸ್ಥಿತಿ ವ್ಯಕ್ತಪಡಿಸುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದುಬಿದ್ದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Video, ಶಾಸಕನ ಜತೆ ರೈಲು ಸೀಟು ವಿನಿಮಯ ಮಾಡಿಕೊಳ್ಳಲು ನಿರಾಕರಣೆ: ರಕ್ತಬರುವ ಹಾಗೇ ಹಿಗ್ಗಾಮುಗ್ಗಾ ಥಳಿಸಿದ ಗುಂಪು