Select Your Language

Notifications

webdunia
webdunia
webdunia
webdunia

ನವಂಬರ್ ನಲ್ಲಿ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ: ವಿಜಯೇಂದ್ರ ಸ್ಪೋಟಕ ಹೇಳಿಕೆ

BY Vijayendra

Krishnaveni K

ಮೈಸೂರು , ಶುಕ್ರವಾರ, 18 ಜುಲೈ 2025 (13:34 IST)
ಮೈಸೂರು: ನವೆಂಬರ್‍ನಲ್ಲಿ ರಾಜ್ಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆಯುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರ ನೀಡಿದರು. ತಂತ್ರ- ಕುತಂತ್ರಗಳಿಗೆ ಅದರದೇ ಆದ ಇತಿಮಿತಿ ಇರುತ್ತದೆ. ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಮಧ್ಯೆ ಕಾಂಗ್ರೆಸ್ಸಿನ ಹೈಕಮಾಂಡ್ ಮಟ್ಟದಲ್ಲಿ ಸಿಎಂ ಕುರ್ಚಿ ವಿಷಯದಲ್ಲಿ ಎರಡೂವರೆ ವರ್ಷ- 2.5 ವರ್ಷ ಎಂಬ ಒಪ್ಪಂದ ಆಗಿದೆ ಎಂದು ಕಾಂಗ್ರೆಸ್ ಮುಖಂಡರೇ ಹೇಳುತ್ತಾರೆ. ಈಗ ರಾಜೀನಾಮೆ ಕೊಡಲೇಬೇಕಾದ ಸನ್ನಿವೇಶ ನಿರ್ಮಾಣವಾಗಿದೆ ಎಂದರು.

ಸರಕಾರ ಬಂದು ಎರಡೂವರೆ ವರ್ಷ ಆಗಿದೆ. ಇವರೇನು ಸಾಧನೆ ಮಾಡಿದ್ದಾರೆ. ರಾಜ್ಯದ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಗ್ಯಾರಂಟಿಗಳಿಗೆ ಹಣ ಸಂಗ್ರಹವಾಗದೆ ಜಿಎಸ್‍ಟಿ ಮೂಲಕ ಬೀದಿ ವ್ಯಾಪಾರಿಗಳಿಗೂ ಬರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಬಿಜೆಪಿ ವಿಪಕ್ಷವಾಗಿ ಸಮರ್ಥವಾಗಿ ಕೆಲಸ ಮಾಡುತ್ತಿದೆ. ನಮಗೆ ಸಂತೃಪ್ತಿ ಇದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.

ಬಿಜೆಪಿ, ರಾಮನಾಥ ಕೋವಿಂದ್ ಅವರನ್ನು ಗೌರವಾನ್ವಿತ ರಾಷ್ಟ್ರಪತಿಗಳನ್ನಾಗಿ ಮಾಡಿದೆ. ಈಗ ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಅವರನ್ನು ಮಾನ್ಯ ರಾಷ್ಟ್ರಪತಿಗಳನ್ನಾಗಿ ಮಾಡಿದ್ದೇವೆ ಎಂದ ಅವರು, ಕಾಂಗ್ರೆಸ್, ಗಾಂಧಿ ಕುಟುಂಬವು ಹಿಂದೆ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರನ್ನು ಅಪಮಾನ ಮಾಡಿ ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಿತ್ತು. ಇದನ್ನು ಸಿದ್ದರಾಮಯ್ಯನವರು ಮರೆತಿದ್ದರೂ ರಾಜ್ಯದ ಜನರು ಮರೆತಿಲ್ಲ. ದೇವರಾಜ ಅರಸು ಅವರ ದಾಖಲೆಯನ್ನು ಮುರಿಯಬೇಕೆಂದು ಹಪಾಹಪಿ ಸಿದ್ದರಾಮಯ್ಯನವರಲ್ಲಿದೆ. ದೇವರಾಜ ಅರಸು ಅವರಿಗೆ ಕಾಂಗ್ರೆಸ್ ಪಕ್ಷ ಮಾಡಿದ ಅಪಮಾನವನ್ನು ಸಿದ್ದರಾಮಯ್ಯನವರು ನೆನಪಿಸಿಕೊಳ್ಳಲಿ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
 
ಸಿದ್ದರಾಮಯ್ಯನವರು ತಮ್ಮ ಕುರ್ಚಿ ಉಳಿವಿಗೆ ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ಅಲ್ಲದೇ ಅಹಿಂದ ಜನರ ಭಜನೆ ಮಾಡುತ್ತಿದ್ದು, ನಿಮ್ಮ ಮುಖವಾಡ ಇವತ್ತು ಕಳಚಿ ಬಿದ್ದಿದೆ. ಅಹಿಂದ ಸಮುದಾಯಗಳಿಗೆ ಸಿದ್ದರಾಮಯ್ಯನವರು ಯಾವುದೇ ರೀತಿಯ ನ್ಯಾಯ ಕೊಡಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ತಮ್ಮ ಮುಖ್ಯಮಂತ್ರಿ ಕುರ್ಚಿ ಉಳಿವಿಗೆ ಸಿದ್ದರಾಮಯ್ಯನವರು ಕಾಂತರಾಜು ವರದಿಯೊಂದಿಗೆ ಬೀದಿ ಬೀದಿ ಅಲೆಯುತ್ತಿದ್ದರಲ್ಲವೇ? ರಾಹುಲ್ ಗಾಂಧಿಯವರ ಆದೇಶದಂತೆ ಸಿದ್ದರಾಮಯ್ಯನವರು ಆ ಕಾಂತರಾಜು ವರದಿಯನ್ನೂ ಕಸದ ಬುಟ್ಟಿಗೆ ಹಾಕಿದರಲ್ಲವೇ? ಹಾಗಾಗಿ ಅಹಿಂದ ಸಮುದಾಯಗಳು ಇವರಿಗೆ ಕೇವಲ ಮತಬ್ಯಾಂಕ್. ಆ ಸಮುದಾಯದ ಅಭಿವೃದ್ಧಿಗೆ ಬದ್ಧತೆ- ಕಳಕಳಿ ಇಲ್ಲ ಎಂದು ಟೀಕಿಸಿದರು.
 
ಪ್ರಚಾರದ ಹಪಾಹಪಿಯಿಂದ 11 ಸಾವು
ಆರ್‍ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ- 11 ಸಾವು ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನ್ಯಾ.ಮೈಕೆಲ್ ಕುನ್ಹ ಅವರು ಸಂಪೂರ್ಣ ವರದಿ ಕೊಟ್ಟಿಲ್ಲ. ಆರ್‍ಸಿಬಿ ಗೆಲುವಿನಲ್ಲಿ ತಮ್ಮ ಪ್ರಚಾರ ಗಿಟ್ಟಿಸಿಕೊಳ್ಳಲು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಪೈಪೋಟಿ ಮಾಡಿದ್ದರು. ಆ ಪ್ರಚಾರದ ಹಪಾಹಪಿಯಿಂದ 11 ಜನರು ಪ್ರಾಣ ಕಳಕೊಂಡರು. ಇದೀಗ ಅರೆಬೆಂದ ವರದಿಯನ್ನು ಹೈಕೋರ್ಟಿಗೆ ನೀಡಿದ್ದಾರೆ. ಇದು ಮುಖ್ಯಮಂತ್ರಿ ಮಾಡಿದ ಅಕ್ಷಮ್ಯ ಅಪರಾಧ ಎಂದು ತಿಳಿಸಿದರು.
 
ಸಮಾವೇಶ ಮಾಡಲು ನಿಮ್ಮ ಸಾಧನೆ ಏನು?
ಇದರ ಹೊಣೆಯನ್ನು ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿಗಳು ಹೊರಬೇಕಿತ್ತು. ಆದರೆ, ಅಮಾಯಕ ಪೊಲೀಸ್ ಅಧಿಕಾರಿಗಳನ್ನು ಬಲಿ ಕೊಟ್ಟು ಮೈಕೆಲ್ ಕುನ್ಹ ವರದಿ ಮೂಲಕ ಆರ್‍ಸಿಬಿಯನ್ನು ಬಲಿಪಶು ಮಾಡಿದ್ದಾರೆ. ತಾವು ನಿರಪರಾಧಿ ಎಂದು ಬಿಂಬಿಸಿಕೊಂಡದ್ದಕ್ಕಾಗಿ ನಿಮ್ಮ ಸಾಧನಾ ಸಮಾವೇಶವೇ? ರಾಜ್ಯದಲ್ಲಿ ಏನು ಕಡಿದು ಕಟ್ಟೆ ಹಾಕಿದ್ದೀರೆಂದು ಸಮಾವೇಶ ಮಾಡುತ್ತಿದ್ದೀರಿ? ಎಂದು ಕೇಳಿದರು.
 
ಕಾಂಗ್ರೆಸ್ ಹೈಕಮಾಂಡಿಗೆ ಬೆದರಿಸುವ ಷಡ್ಯಂತ್ರ
ಮೈಸೂರು ಜಿಲ್ಲೆಯಲ್ಲಿ ಏನು ಅಭಿವೃದ್ಧಿ ಮಾಡಿದ್ದೀರೆಂದು ಸಾಧನಾ ಸಮಾವೇಶ ಮಾಡುತ್ತಿದ್ದೀರಿ? ಎಂದ ಅವರು, ಅಭಿವೃದ್ಧಿಗೆ ಸಂಬಂಧಿಸಿ ಮುಖ್ಯಮಂತ್ರಿಗಳು ಸಮಾವೇಶ ಮಾಡುತ್ತಿಲ್ಲ. ಬದಲಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಂದರ್ಭ ಸನ್ನಿಹಿತವಾಗಿದ್ದು, ಈಗ ಸಮಾವೇಶದ ಮೂಲಕ ಕಾಂಗ್ರೆಸ್ ಹೈಕಮಾಂಡಿಗೆ ಬೆದರಿಸುವ ಷಡ್ಯಂತ್ರ ಇದರ ಹಿಂದಿದೆ ಎಂದು ದೂರಿದರು. ಮುಡಾ ಹಗರಣದ ವಿರುದ್ಧ ಬಿಜೆಪಿ ಪಾದಯಾತ್ರೆ ಮಾಡಿತ್ತು. ಆತಂಕಕ್ಕೆ ಒಳಗಾದ ಸಿದ್ದರಾಮಯ್ಯನವರು ಮೈಸೂರು ಮತ್ತಿತರ ಕಡೆ ಸಮಾವೇಶ ಮಾಡಿದ್ದರು. ಮುಖ್ಯಮಂತ್ರಿ ಕುರ್ಚಿಗೆ ಕಂಟಕ ಬಂದಾಗಲೆಲ್ಲ, ರಾಜೀನಾಮೆ ಕೊಡುವ ಸಂದರ್ಭ ಬಂದಾಗ ಸಿದ್ದರಾಮಯ್ಯನವರಿಗೆ ಅಹಿಂದ ಸಮುದಾಯಗಳು ನೆನಪಾಗುತ್ತದೆ ಎಂದು ನುಡಿದರು.
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಬೈರತಿ ಬಸವರಾಜು ವಿರುದ್ಧ ಪೊಲೀಸರೇ ಹೆಸರು ಸೇರಿಸಿಕೊಂಡಿದ್ದಾರೆ: ಆರ್ ಅಶೋಕ್