Publish Date: Sat, 05 Jul 2025 (14:54 IST)
Updated Date: Sat, 05 Jul 2025 (14:58 IST)
ಬೆಂಗಳೂರು: ಆರೆಸ್ಸೆಸ್ ನಿಷೇಧ ಕುರಿತ ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆಯವರ ಹೇಳಿಕೆ ಹುಚ್ಚುತನದ್ದು ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಟೀಕಿಸಿದ್ದು, ಅವರು ತಮ್ಮ ಹೇಳಿಕೆ ಸಂಬಂಧ ದೇಶದ ಜನರ ಕ್ಷಮಾಪಣೆ ಕೇಳಬೇಕೆಂದು ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧಿಸುವುದಾಗಿ ಹೇಳಿದ್ದಾರೆ ಎಂದರಲ್ಲದೆ, ಇಡೀ ದೇಶದ ಉದ್ದಗಲಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗರಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ನಾವೆಲ್ಲರೂ ಬೆಳೆದವರು ಎಂದು ಗಮನ ಸೆಳೆದರು.
ಮೊದಲನೆಯದಾಗಿ ನೀವು ಅಧಿಕಾರಕ್ಕೆ ಬರುವುದು ಕನಸಿನ ಮಾತು. ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತ. ಇಂಥ ಹುಚ್ಚುತನದ ಹೇಳಿಕೆ ಕೊಟ್ಟು ಜನರ ಮುಂದೆ ಹಗುರ ಆಗದಿರಿ ಎಂದು ನಾನು ಒತ್ತಾಯಿಸುವೆ ಮತ್ತು ಸಲಹೆ ನೀಡುತ್ತೇನೆ ಎಂದು ತಿಳಿಸಿದರು.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ನಾವು ಮೊದಲು ಆರ್ ಎಸ್ಎಸ್ ನ್ನು ನಿಷೇಧ ಮಾಡ್ತೀವಿ. ಈ ಹಿಂದೆ ನಿಷೇಧ ಹಿಂತೆಗೆದುಕೊಂಡು ತಪ್ಪು ಮಾಡಿದ್ವಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದರು. ಅವರಿಗೆ ಈಗ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.