Select Your Language

Notifications

webdunia
webdunia
webdunia
webdunia

ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ನೂತನ ಸಿಎಂ ಬೊಮ್ಮಾಯಿ ಅವರು ಸರಿಪಡಿಸಲಿ: ಡಿ.ಕೆ. ಶಿವಕುಮಾರ್

ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ನೂತನ ಸಿಎಂ ಬೊಮ್ಮಾಯಿ ಅವರು ಸರಿಪಡಿಸಲಿ: ಡಿ.ಕೆ. ಶಿವಕುಮಾರ್
bangalore , ಬುಧವಾರ, 28 ಜುಲೈ 2021 (15:03 IST)
ಬೆಂಗಳೂರು:'ಕಳೆದ ಎರಡು ವರ್ಷದಿಂದ ರಾಜ್ಯಕ್ಕಾಗಿರುವ ಅನ್ಯಾಯವನ್ನು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರಿಪಡಿಸಲಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
 
ಸದಾಶಿವನಗರ ನಿವಾಸದಲ್ಲಿ ಬುಧವಾರ ಮಾಧ್ಯಮ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು:
 
'ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳು. ಕಳೆದ ಎರಡು ವರ್ಷಗಳಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಅವರು ಸರಿಪಡಿಸುತ್ತಾರೆಂಬ ನಿರೀಕ್ಷೆ ಇದೆ.
 
ಕೇಂದ್ರ ಸರ್ಕಾರ ನೀರಾವರಿ, ಹಣಕಾಸು ಸೇರಿದಂತೆ ಯಾವುದೇ ವಿಚಾರದಲ್ಲೂ ರಾಜ್ಯಕ್ಕೆ ಸಹಕಾರ ಕೊಟ್ಟಿಲ್ಲ. ಯಡಿಯೂರಪ್ಪನವರು ಕಣ್ಣಲ್ಲಿ ನೀರು ಹಾಕಿ, ನೋವು ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳು ಬೊಮ್ಮಾಯಿಯವರ ಹೆಸರು ಸೂಚಿಸಿದ್ದಾರೆ ಎಂದು ಮಾಧ್ಯಮಗಳಿಂದ ಗೊತ್ತಾಗಿದೆ. ನಮಗೆ ಒಳ್ಳೆಯ ಆಡಳಿತ ಬೇಕು ಅಷ್ಟೇ. 
 
ಕೇಂದ್ರ ನಾಯಕರು ನನಗೆ ಸಂಪುಟ ರಚನೆಗೆ ಎರಡು ತಿಂಗಳು ಅವಕಾಶ ನೀಡಲಿಲ್ಲ ಎಂದು ಯಡಿಯೂರಪ್ಪನವರು ಹೇಳಿಕೊಂಡಿದ್ದಾರೆ. ಅನೇಕ ರೀತಿಯಲ್ಲಿ ತಮಗಾದ ನೋವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನೇಕರು ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಚಂಡ ಹೋರಾಟ ಮಾಡಿದ್ದಾರೆ. ಕೆಲವು ಮಂತ್ರಿಗಳು ಸಿಎಂ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದರು, ಮತ್ತೆ ಕೆಲವರು ಪರೀಕ್ಷೆ ಬರೆದಿರುವುದಾಗಿ ತಿಳಿಸಿದರು. ಶಾಸಕರಿಂದಲೂ ಅವರಿಗೆ ವಿರೋಧ
ವ್ಯಕ್ತವಾಗಿದೆ.
 
ಸರ್ಕಾರದಲ್ಲಿ ಸಮನ್ವಯತೆ ಇರಲಿಲ್ಲ. ಹೀಗಾಗಿ ಎರಡು ವರ್ಷಗಳಲ್ಲಿ ರಾಜ್ಯ 20 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ. ಏನೇನಾಗಿದೆ ಎಂದು ಬೇರೆ ಸಮಯದಲ್ಲಿ ಮಾತನಾಡೋಣ. ಬಿಜೆಪಿಯಲ್ಲಿ ಯಾರ ಕೈ ಮೇಲಾಯ್ತು ಎಂಬುದು ಆ ಪಕ್ಷದ ಆಂತರಿಕ ವಿಚಾರ. ಅದು ನಮಗೆ ಬೇಡ.
 
ಬೊಮ್ಮಾಯಿ ಅವರು ಉತ್ತಮ ಆಡಳಿತ ನೀಡಲಿ, ರಾಜ್ಯಕ್ಕೆ ನ್ಯಾಯ ಒದಗಿಸಲಿ, ಅವರಿಗೆ ಶುಭವಾಗಲಿ.'

Share this Story:

Follow Webdunia kannada

ಮುಂದಿನ ಸುದ್ದಿ

ಆಡಿಯೋ ಟ್ವೀಟ್ ಮಾಡೋದು ಹೀಗೆ...?