Publish Date: Wed, 28 Jul 2021 (14:13 IST)
Updated Date: Wed, 28 Jul 2021 (14:16 IST)
ನವದೆಹಲಿ(ಜು.28): ಬಿಎಸ್ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಸವರಾಜ ಬೊಮ್ಮಾಯಿ ಕರ್ನಾಟಕದ ನೂತನ ಸಿಎ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೂಲಕ ಕಳೆದ ಕೆಲ ಸಮಯದಿಂದ ನಡೆದು ಬಂದಿದ್ದ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ.
* ಬಿಎಸ್ವೈ ರಾಜೀನಾಮೆ, ಬೊಮ್ಮಾಯಿ ನೂತನ ಸಿಎಂ
* ಬಿಎಸ್ವೈ ರಾಜೀನಾಮೆ ಬೆನ್ನಲ್ಲೇ ಪಿಎಂ ಮೋದಿ ಟ್ವೀಟ್
* ಯಾವುದೇ ಪದಗಳಿಂದ ಅವರ ಕೊಡುಗೆ ವರ್ಣಿಸಲು ಸಾಧ್ಯವಿಲ್ಲ
ಇನ್ನು ಬಿಎಸ್ವೈ ರಾಜೀನಾಮೆಯಿಂದ ಅವರ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದರೂ, ಅವರ 'ಮಾನಸ ಪುತ್ರ' ಎಂದೇ ಕರೆಸಿಕೊಳ್ಳುವ ಬೊಮ್ಮಾಯಿ ನೂತನ ಸಿಎಂ ಆಗಿರುವುದು ಅವರನ್ನು ಕೊಂಚ ಸಮಾಧಾನಗೊಳಿಸಿದೆ. ಅಲ್ಲದೇ ಬಿಎಸ್ವೈ ಓಲೈಕೆ ಜೊತೆಗೆ ಲಿಂಗಾಯತರನ್ನು ಸಮಾಧಾನಪಡಿಸಲು ಬಿಜೆಪಿಗೆ ಬೊಮ್ಮಾಯಿಯನ್ನಿ ಸಿಎಂ ಆಗಿ ಆಯ್ಕೆ ಮಾಡುವುದು ಅನಿವಾರ್ಯವಾಗಿತ್ತು. ಅದರಂತೆ ಸದ್ಯ ಸಿಎಂ ಆಯ್ಕೆ ಕಗ್ಗಂಟು ಯಾವುದೇ ಸಮಸ್ಯೆ ಇಲ್ಲದೇ ಇತ್ಯರ್ಥವಾಗಿದೆ.
ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರ್ನಾಟಕ ಬಿಜೆಪಿಯ ಭೀಷ್ಮ ಎನಿಸಿಕೊಂಡಿರುವ ಬಬಿ. ಎಸ್. ಯಡಿಯೂರಪ್ಪ ಪದ್ತ್ಯಾಗ ಹಾಗೂ ಕರ್ನಾಟಕದ ಪರ ಅವರ ಕೊಡುಗೆ ಬಗ್ಗೆ ಟ್ವೀಟ್ ಮಾಡಿದ್ದಾರೆ. ನಮ್ಮ ಪಕ್ಷ ಹಾಗೂ ಕರ್ನಾಟಕದ ಅಭಿವೃದ್ಧಿಗೆ ಶ್ರೀ ಬಿ. ಎಸ್. ಯಡಿಯೂರಪ್ಪನವರ ಅಪರಿಮಿತ ಕೊಡುಗೆಯ ಬಗ್ಗೆ ಯಾವುದೇ ಪದಗಳಿಂದ ಮೆಚ್ಚುಗೆ ವ್ಯಕ್ತಪಡಿಸಲು ಸಾಧ್ಯವಿಲ್ಲ. ಇದ್ಯಾವುದೂ ಸೂಕ್ತ ನ್ಯಾಯ ಒದಗಿಸಲು ಸಾಧ್ಯವಿಲ್ಲ. ದಶಕಗಳ ಕಾಲ ಅವರು ಕಷ್ಟಪಟ್ಟು ದುಡಿದು, ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಸಂಚರಿಸಿ ಜನರನ್ನು ಒಗ್ಗೂಡಿಸಿದ್ದಾರೆ. ಸಾಮಾಜಿಕ ಕಲ್ಯಾಣಕ್ಕಾಗಿ ಅವರ ಬದ್ಧತೆ ಅತೀವ ಮೆಚ್ಚುಗೆ ಗಳಿಸಿದ್ದಾರೆ ಎಂದಿರುವ ಪಿಎಂ ಮೋದಿ, ರಾಜ್ಯ ಹಾಗೂ ಪಕ್ಷದ ಪರ ಅವರ ಶ್ರಮಕ್ಕೆ ಸಲಾಂ ಎಂದಿದ್ದಾರೆ.
ಇನ್ನು ಬೊಮ್ಮಾಯಿ ಸಿಎಂ ಆದ ಬಳಿಕ ಯಡಿಯೂರಪ್ಪ ಮುಂದಿನ ನಡೆ ಏನು ಎಂಬ ಕುತೂಹಲ ಎಲ್ಲರಲ್ಲೂ ಸಹಜವಾಗೇ ಕಾಡಿದೆ. ಆದರೆ ಇವೆಲ್ಲಕ್ಕೂ ಉತ್ತರಿಸಿರುವ ಬಿಎಸ್ವೈ ತಾನು ಇನ್ಮುಂದೆಯೂ ಪಕ್ಷದ ಏಳಿಕೆಗಾಗಿ ಶ್ರಮ ವಹಿಸುತ್ತೇನೆ. ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತೇನೆ ಎನ್ನುವ ಮೂಲಕ ರಾಜ್ಯಪಾಲರ ಸ್ಥಾನ ಒಪ್ಪಿಕೊಳ್ಳುವುದನ್ನು ನಿರಾಕರಿಸಿದ್ದಾರೆ.