Publish Date: Fri, 21 Jan 2022 (14:05 IST)
Updated Date: Fri, 21 Jan 2022 (15:56 IST)
ನಡುರಸ್ತೆಯಲ್ಲೇ ಬಿಎಂಟಿಸಿ ಬಸ್ಸೊಂದು ಧಗಧಗನೆ ಹೊತ್ತಿ ಉರಿದ ಘಟನೆ ಬೆಂಗಳೂರಿನಲ್ಲಿ ಶುಕ್ರವಾರ ನಡೆದಿದೆ.
ಬೆಂಗಳೂರಿನ ಚಾಮರಾಜಪೇಟೆ (chamarajpet)ಯ ಮಕ್ಕಳಕೂಟ (makkala koota) ಬಳಿ ಈ ಘಟನೆ ನಡೆದಿದ್ದು, ದೀಪಾಂಜಲಿನಗರ ಡಿಪೋಗೆ ಸೇರಿದ K.R. ಮಾರ್ಕೆಟ್ ಕಡೆ ತೆರಳುತ್ತಿದ್ದ ಬಿಎಂಟಿಸಿ ಬಸ್ (KA 57 F 1592) ಬೆಂಕಿಗಾಹುತಿಯಾಗಿದೆ.
ಬಸ್ ಚಲಿಸುತ್ತಿದ್ದಾಗ ಮಕ್ಕಳಕೂಟ ಬಳಿ ಬೆಂಕಿ ಕಾಣಿಸಿಕೊಂಡಿತ್ತು. ಆರಂಭದಲ್ಲಿ ಬಸ್ ನ ಇಂಜಿನಲ್ಲಿ ಹೊಗೆ ಕಾಣಿಸಿಕೊಂಡಿತ್ತು. ಬಳಿಕ ನೋಡನೋಡುತ್ತಲೇ ಬೆಂಕಿಯ ರಭಸ ಜೋರಾಗಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ ಪ್ರಯಾಣಿಕರು ಪಾರಾಗಿದ್ದಾರೆ.
ಬಸ್ ನಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಚಾಲಕ ಮತ್ತು ನಿರ್ವಾಹಕರು ಬಸ್ ನಿಂದ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ. ಈ ವೇಳೆ ಬಸ್ ನಲ್ಲಿ ಸುಮಾರು 40 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಬಳಿಕ ಸಿಬ್ಬಂದಿ ಪ್ರಯಾಣಿಕರಿಗೆ ಬೇರೆ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ.
ಇನ್ನು ಬಸ್ ನಲ್ಲಿದ್ದ ಫಸ್ಟ್ ಏಯ್ಡ್ ಹಾಗೂ ಟಿಕೆಟ್ ಹಾಗೂ ದಿನದ ಪಾಸ್ ಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.