Publish Date: Wed, 04 Aug 2021 (08:19 IST)
Updated Date: Wed, 04 Aug 2021 (08:24 IST)
ಕೊಯಮತ್ತೂರು (ಆ.04): ಮೇಕೆದಾಟು ಅಣೆಕಟ್ಟು ವಿಷಯದಲ್ಲಿ ತಮಿಳುನಾಡು ಬಿಜೆಪಿ ಘಟಕ ಡಬ್ಬಲ್ ಆ್ಯಕ್ಟಿಂಗ್ ಮಾಡುತ್ತಿದೆ ಎಂದು ಮಕ್ಕಳ್ ನೀಧಿ ಮಯ್ಯಂ ಪಕ್ಷದ ನೇತಾರ, ನಟ ಕಮಲ್ಹಾಸನ್ ವ್ಯಂಗ್ಯವಾಡಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಒಂದೆಡೆ ತಮಿಳುನಾಡು ಬಿಜೆಪಿ ಮೇಕೆದಾಟು ಯೋಜನೆಯ ವಿರುದ್ಧ ಪ್ರತಿಭಟನೆ ಮಾಡಲು ಮುಂದಾಗಿದೆ. ಕರ್ನಾಟಕ ಬಿಜೆಪಿ ಯೋಜನೆಗೆ ಜಾರಿಗೆ ತರಲು ಹವಣಿಸುತ್ತಿದೆ.
ಇದು ಬಿಜೆಪಿ ದೇಶದಲ್ಲಿ ಮಾಡುತ್ತಿರುವ ಡಬ್ಬಲ್ ಆಕ್ಟಿಂಗ್. ನಾನು ನಟನಾಗಿ 25ಕ್ಕೂ ಹೆಚ್ಚು ಚಿತ್ರದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಿದ್ದೇನೆ ಆದರೆ ರಾಜಕೀಯದಲ್ಲಿ ಬಿಜೆಪಿ ದ್ವಿಪಾತ್ರಾಭಿನಯ ಮಾಡುತ್ತಿದೆ.
ಕರ್ನಾಟಕ ಮತ್ತು ತಮಿಳುನಾಡು ಬಿಜೆಪಿಗಳೆರಡು ಕೇಂದ್ರ ಸರ್ಕಾರದ ಕೈಗೊಂಬೆಗಳು. ಭಾರತದಲ್ಲಿ ಬಿಜೆಪಿ ಈಸ್ಟ್ ಇಂಡಿಯಾ ಕಂಪೆನಿಯಂತೆ ಬೆಳೆಯುತ್ತಿದೆ. ರಾಜಕೀಯ ಲಾಭಕ್ಕಾಗಿ ಉತ್ತರ ಭಾರತದ ಕಂಪನಿಯಾದ ಬಿಜೆಪಿ ತಮಿಳುನಾಡನ್ನು ಒಡೆಯುವ ಕುತಂತ್ರಗಳನ್ನು ನಡೆಸುತ್ತಿದೆ ಎಂದು ಹೇಳಿದರು.