Publish Date: Fri, 16 Aug 2024 (10:14 IST)
Updated Date: Fri, 16 Aug 2024 (10:17 IST)
ಬೆಂಗಳೂರು: ಚನ್ನಪಟ್ಟಣ ಬೈ ಎಲೆಕ್ಷನ್ ನಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಅಭ್ಯರ್ಥಿ ವಿಚಾರವಾಗಿ ಜಂಗೀ ಕುಸ್ತಿಯಾಗುತ್ತಿದೆ. ಸಿಪಿ ಯೋಗೇಶ್ವರ್ ಹೈಕಮಾಂಡ್ ಲೆವೆಲ್ ನಲ್ಲಿ ಲಾಬಿ ಮಾಡಿಕೊಂಡು ಬಂದಿದ್ದು ಈಗ ಬಿಜೆಪಿ ನಾಯಕರು ಕುಮಾರಸ್ವಾಮಿ ಮೇಲೆ ಒತ್ತಡ ಹಾಕುವ ಕೆಲಸ ಮಾಡುತ್ತಿದ್ದಾರೆ.
ಚನ್ನಪಟ್ಟಣ ಟಿಕೆಟ್ ಗಾಗಿ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಹೈಕಮಾಂಡ್ ಲೆವೆಲ್ ನಲ್ಲಿ ಲಾಬಿ ಮಾಡಿಕೊಂಡು ಬಂದಿದ್ದಾರೆ. ಚನ್ನಪಟ್ಟಣ ಕುಮಾರಸ್ವಾಮಿಯ ಕ್ಷೇತ್ರ. ಅವರು ಸಂಸದರಾಗಿರುವ ಕಾರಣಕ್ಕೆ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ರಾಜ್ಯದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಕಾರಣ ಜೆಡಿಎಸ್ ಈಗ ಈ ಕ್ಷೇತ್ರದ ಟಿಕೆಟ್ ಗಾಗಿ ಗುದ್ದಾಟ ನಡೆಸುತ್ತಿದೆ.
ತಮ್ಮ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಲು ಕುಮಾರಸ್ವಾಮಿ ತಯಾರಿಲ್ಲ. ಆದರೆ ಯೋಗೇಶ್ವರ್ ಗೆ ಚನ್ನಪಟ್ಟಣದ ಮೇಲೆ ಆಸೆ. ಹೀಗಾಗಿ ಹೈಕಮಾಂಡ್ ಮೂಲಕ ಒತ್ತಡ ಹಾಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಒಂದು ವೇಳೆ ಕುಮಾರಸ್ವಾಮಿ ಮನವೊಲಿಸಲು ಯಶಸ್ವಿಯಾದರೆ ಚನ್ನಪಟ್ಟಣಕ್ಕೆ ಯೋಗೇಶ್ವರ್ ಅವರೇ ಅಭ್ಯರ್ಥಿ ಆಗಲಿದ್ದಾರೆ.
ಈ ನಡುವೆ ಬಿಜೆಪಿ ಕೈ ಕೊಟ್ಟರೆ ಯೋಗೇಶ್ವರ್ ಅವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ಕಾಂಗ್ರೆಸ್ ಕಾಯುತ್ತಿದೆ. ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿ ಬಂದರೆ ಅವರನ್ನು ಸ್ವಾಗತಿಸಲು ಸಿದ್ಧ ಎಂದು ಕಾಂಗ್ರೆಸ್ ನಾಯಕರು ಈಗಾಗಲೇ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಬಿಜೆಪಿ ಕೂಡಾ ಯೋಗೇಶ್ವರ್ ಕೈ ತಪ್ಪದಂತೆ ಪ್ರಯತ್ನ ಮಾಡಲಾಗುತ್ತಿದೆ.