Publish Date: Mon, 30 Oct 2023 (15:46 IST)
Updated Date: Mon, 30 Oct 2023 (14:49 IST)
ನಗರದಲ್ಲಿ ಬಿಸಿಯೂಟ ನೌಕರರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ರೈಲ್ವೇ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ಕೂಡ ಆಯೋಜಿಸಿರುವುದರಿಂದ ನಗರದ ಕೇಂದ್ರಭಾಗದಲ್ಲಿ ವಾಹನ ದಟ್ಟಣೆ ಹೆಚ್ಚಿದೆ.
ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬಿಸಿಯೂಟ ನೌಕರರು ಕರೆ ನೀಡಿದ್ದು, ರಾಜ್ಯಾದ್ಯಂತ ವಿವಿಧ ಜಿಲ್ಲೆಗಳ ಹಲವು ಕಾರ್ಯಕರ್ತರು ಮುಷ್ಕರಕ್ಕೆ ಆಗಮಿಸುತ್ತಿದ್ದಾರೆ. ರೈಲ್ವೇ ನಿಲ್ದಾಣದಿಂದ ಮೆಜೆಸ್ಟಿಕ್ ಮಾರ್ಗವಾಗಿ ಸ್ವಾತಂತ್ರ್ಯ ಉದ್ಯಾನವನದವರೆಗೆ ಬೃಹತ್ ಮೆರವಣಿಗೆ ಸಾಗಿದ್ದು ಹೀಗಾಗಿ ಮೆಜೆಸ್ಟಿಕ್ ಸುತ್ತಮುತ್ತ ಸಂಚರಿಸುವವರಿಗೆ ಟ್ರಾಫಿಕ್ ಬಿಸಿ ತಟ್ಟಿದೆ.
ಪ್ರತಿ ಶಾಲೆಗೆ ಇಬ್ಬರು ಬಿಸಿಯೂಟ ನೌಕರರು ಬೇಕು, ಕೆಲಸದಿಂದ ತೆಗೆದರೆ ಇಡುಗಂಟು ನೀಡಬೇಕು, ಕರ್ತವ್ಯದಲ್ಲಿರುವಾಗ ಸಾವನ್ನಪ್ಪಿದರೆ ಪರಿಹಾರ ನೀಡಬೇಕು, ಬಿಸಿಯೂಟ ನೌಕರರನ್ನು ಶಿಕ್ಷಣ ಇಲಾಖೆಗೆ ವರ್ಗಾಯಿಸಬೇಕು, ಹತ್ತು ಸಾವಿರ ರೂ. ವೇತನ ಜನವರಿ 2023 ರಿಂದಲೇ ಜಾರಿಗೊಳಿಸಬೇಕು ಇತ್ಯಾದಿ 15 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಿಸಿಯೂಟ ನೌಕರರು ಪ್ರತಿಭಟನೆ ನಡೆಸಿದ್ದರು.