ಬೆಂಗಳೂರು: ಕುಂಭಮೇಳದಲ್ಲಿ 40-50 ಜನ ಕಾಲ್ತುಳಿತದಲ್ಲಿ ಸತ್ತರು. ಆಗ ಅಲ್ಲಿನ ಮುಖ್ಯಮಂತ್ರಿಗಳ ರಾಜೀನಾಮೆ ಕೇಳಿದರೇ? ಸೇತುವೆಯೊಂದು ಉದ್ಘಾಟನೆಯಾದ ದಿನವೇ ಬಿದ್ದು 140 ಜನ ಸತ್ತರು, ಆಗ ಪ್ರಧಾನಿಗಳ ರಾಜೀನಾಮೆ ಕೇಳಿದರೇ ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದರು.
ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ನಡೆದ ಕಾಲ್ತುಳಿತ ಸಂಬಂಧ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯಿಸುತ್ತಿದೆ.
ಈ ಸಂಬಂಧ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಕುಂಭಮೇಳದ ಕಾಲ್ತುಳಿತ ದುರಂತ ಹಾಗೂ ಸೇತುವೆ ದುರಂತದ ಅವಘಡವನ್ನು ಮುಂದಿಟ್ಟು ಹಲವು ವಿರೋಧ ಪಕ್ಷಗಳ ಟೀಕೆಗೆ ಪ್ರಶ್ನೆ ಮಾಡಿದರು.
ಗೋಧ್ರಾ ಹತ್ಯಾಕಾಂಡದಲ್ಲಿ ಎಷ್ಟು ಜನ ಸತ್ತರು, ಆಗ ಗುಜರಾತ್ ಮುಖ್ಯಮಂತ್ರಿಗಳು ಯಾರಾಗಿದ್ದರು? ಅವರ ರಾಜೀನಾಮೆ ಕೇಳಿದರೇ? ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಸರಬರಾಜು ಮಾಡದೇ ಅಷ್ಟು ಜನ ಸತ್ತಾಗ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಿದರೇ?
ಬಿಜೆಪಿ ಸರ್ಕಾರದಿಂದಾದ ಸಾವು - ನೋವುಗಳಿಗೆ ಅವರು ರಾಜಕೀಯ ನಿವೃತ್ತಿಯನ್ನೇ ಪಡೆಯಬೇಕು ಎಂದು ಪ್ರಶ್ನೆ ಮಾಡಿದರು.