ಬೆಳ್ತಂಗಡಿ: ಇಲ್ಲಿನ 9 ನೇ ತರಗತಿ ವಿದ್ಯಾರ್ಥಿ ಸುಮಂತ್ ನಿಗೂಢ ಸಾವು ಪ್ರಕರಣ ಈಗ ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಾವಿನ ಹಿಂದಿನ ದಿನ ಬಾಲಕ ಸುಮಂತ್ ಏನು ಮಾಡಿದ್ದ ಎಂದು ಆತನ ತಂದೆ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಸುಮಂತ್ ಪಕ್ಕದ ದೇವಸ್ಥಾನಕ್ಕೆ ಧನು ಪೂಜೆಗೆಂದು ವಾರಕ್ಕೊಮ್ಮೆ ಸ್ನೇಹಿತರ ಜೊತೆ ಹೋಗುತ್ತಿದ್ದ. ಈ ಬಾರಿಯೂ ಅದೇ ರೀತಿ ಬೆಳ್ಳಂ ಬೆಳಿಗ್ಗೆ ಮನೆಯಿಂದ ಹೊರಟಿದ್ದಾನೆ. ಆದರೆ ಅತ್ತ ದೇವಸ್ಥಾನಕ್ಕೂ ಬರಲಿಲ್ಲ, ಮನೆಗೂ ವಾಪಸಾಗಲಿಲ್ಲ. ಬಳಿಕ ಆತನ ಮೃತದೇಹ ಮನೆಯಿಂದ 500 ಮೀ ದೂರದಲ್ಲಿರುವ ಬಾವಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಸುಮಂತ್ ತಂದೆ ಮಾಧ್ಯಮಗಳಿಗೆ ಹೇಳಿದ್ದಿಷ್ಟು.
ವಾರಕ್ಕೆ ಒಂದು ಸಾರಿ ಧನು ಪೂಜೆಗೆ ಹೋಗಿದ್ದ. ಹಾಗೆ ಮೂರು ಸಾರಿ ಹೋಗಿದ್ದ. ಸಂಕ್ರಾಂತಿ ಹಿಂದಿನ ಕೊನೆ ಸಾರಿ ಹೋಗುವುದಾಗಿ ಹೇಳಿದ್ದ. ಹಾಗಾಗಿ ಹಿಂದಿನ ದಿನವೇ ಡ್ರೆಸ್ ಎಲ್ಲಾ ತೆಗೆದು ಇಟ್ಟಿದ್ದ. ಬೆಳಿಗ್ಗೆ ಸುಮಾರು 5 ಗಂಟೆಗೆ ಅವನು ಹೋಗಿರಬಹುದು. ನಮಗೆ ಎಚ್ಚರ ಆಗಿ ತೊಂದರೆ ಆಗುವುದು ಬೇಡ ಎಂದು ನಮಗೆ ಹೇಳದೇ ಹೋಗಿದ್ದಾನೆ.
ಬೆಳಿಗ್ಗೆ 6.30 ಕ್ಕೆ ನನ್ನ ಪತ್ನಿ ಚಾ ಮಾಡ್ತಿದ್ದಳು. ಆಗ ಅವಳಿಗೆ ಅವನ ಸ್ನೇಹಿತರು ಕರೆ ಮಾಡಿ ಯಾಕೆ ಸುಮಂತ್ ಬರ್ಲಿಲ್ಲ ಎಂದು ಕೇಳಿದಾಗ ನಮಗೆ ಸಂಶಯ ಆಯಿತು. ಹಾಗೆ ನಾವೆಲ್ಲಾ ಹೋಗಿ ಹುಡುಕುವಾಗ ಬಾವಿಯ ಹತ್ತಿರ ಸ್ವಲ್ಪ ಹೆಚ್ಚು ರಕ್ತದ ಕಲೆ ಕಂಡಿತು. ನಂತರ ಊರವರೆಲ್ಲಾ ಸೇರಿಕೊಂಡು ಒಂದು ನಾಪತ್ತೆ ದೂರು ಕೊಟ್ಟೆವು. ಪೊಲೀಸರು ಬಂದು ಹುಡುಕಿದಾಗ ಬಾವಿಯಲ್ಲಿ ಮೃತದೇಹ ಸಿಕ್ಕಿದೆ.
ನಮಗೆ ಯಾರೂ ಶತ್ರುಗಳಿಲ್ಲ. ಈ ಊರಲ್ಲಿ ಯಾರ ಮೇಲೂ ಅನುಮಾನ ಇಲ್ಲ. ಅವನಿಗೆ ಗುಜರಾತ್ ಗೆ (ಸೈನ್ಸ್ ಫೇರ್) ಹೋಗುವ ಅವಕಾಶ ಸಿಕ್ಕಿತ್ತು. ನಮಗೆ ಯಾರಿಗೂ ಇದಕ್ಕೆಲ್ಲಾ ಅವಕಾಶ ಸಿಕ್ಕಿರಲಿಲ್ಲ. ನಿನಗಾದರೂ ಸಿಕ್ಕಿದೆಯಲ್ಲ ಮಗಾ. ಹೋಗು ಎಂದು ಹೇಳಿದ್ದೆವು. ಗುಜರಾತ್ ಗೆ ಹೋಗ್ಲಿಕೆ ಟಿಕೆಟ್ ಬುಕ್ ಆಗಿತ್ತು, ಹೊಸ ಡ್ರೆಸ್ ಎಲ್ಲಾ ತೆಗೆದಿಟ್ಟಿದ್ದ. ಅವನಿಗೆ ಏನಾಯ್ತು ಗೊತ್ತಿಲ್ಲ ಎಂದು ಸುಮಂತ್ ತಂದೆ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು.