Publish Date: Fri, 09 Jan 2026 (10:21 IST)
Updated Date: Fri, 09 Jan 2026 (10:24 IST)
ಬಳ್ಳಾರಿ: ಹೊಸ ವರ್ಷದಂದು ಬಳ್ಳಾರಿಯಲ್ಲಿ ನಡೆದಿದ್ದ ಬ್ಯಾನರ್ ಗಲಾಟೆಯಲ್ಲಿ ಮೃತಪಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತನ ಮರಣೋತ್ತರ ಪರೀಕ್ಷೆಯಲ್ಲಿ ಭಯಾನಕ ವಿಚಾರಗಳು ಹೊರಬಿದ್ದಿವೆ.
ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಗನ್ ಮ್ಯಾನ್ ಗುಂಡಿನಿಂದಲೇ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ರೆಡ್ಡಿ ಸಾವನ್ನಪ್ಪಿದ್ದಾರೆ ಎನ್ನುವುದು ಖಚಿತವಾಗಿತ್ತು. ಇದರ ಬೆನ್ನಲ್ಲೇ ಈಗ ಮರಣೋತ್ತರ ಪರೀಕ್ಷೆ ವರದಿಗಳು ಬಹಿರಂಗವಾಗಿದೆ.
ಭರತ್ ರೆಡ್ಡಿ ಆಪ್ತನಿಂದ ಅತೀ ಹತ್ತಿರದಲ್ಲೇ ರಾಜಶೇಖರ ರೆಡ್ಡಿಗೆ ಗುಂಡು ಹೊಡೆಯಲಾಗಿದೆ ಎನ್ನುವುದು ಗೊತ್ತಾಗಿದೆ. ಆತನ ಬೆನ್ನಿಗೆ 17 ಗುಂಡಿನ ಚೂರು ಹೊಕ್ಕಿತ್ತು. ಸಾವಿಗೂ ಮೊದಲೇ ಆತನ ದೇಹದ ಮೇಲೆ ರಕ್ತಸ್ರಾವವಾಗಿದೆ. ಅಂದರೆ ಗುಂಡೇಟಿಗೆ ಮೊದಲು ಆತನ ಮೇಲೆ ಹಲ್ಲೆಯಾಗಿರುವ ಶಂಕೆಯಿದೆ. ಇದು ದೊಂಬಿ ವೇಳೆ ಪರಸ್ಪರ ನೂಕುನುಗ್ಗಲಿನಿಂದ ಉಂಟಾಗಿರುವ ಗಾಯಗಳೇ ಅಥವಾ ಸಾವಿಗೆ ಮೊದಲು ಆತನ ಮೇಲೆ ಯಾರಾದರೂ ಹಲ್ಲೆ ನಡೆಸಿದ್ದಾರೆಯೇ ಎನ್ನುವುದು ಗೊತ್ತಾಗಬೇಕಿದೆ.
ಆತನ ಬೆನ್ನಿಗೆ ಬಿದ್ದ ಗುಂಡು ಸೀಳಿಕೊಂಡು ಎದೆಗೆ ತಾಕಿದೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಆತ ಸಾವನ್ನಪ್ಪಿದ್ದಾನೆ. ಹೀಗಾಗಿ ಈಗ ಘಟನೆ ಬಗ್ಗೆ ಸಾಕಷ್ಟು ಅನುಮಾನ ಮೂಡಿದ್ದು ತನಿಖೆಯಿಂದಷ್ಟೇ ಎಲ್ಲವೂ ಗೊತ್ತಾಗಬೇಕಿದೆ.