Publish Date: Wed, 28 Aug 2024 (11:25 IST)
Updated Date: Wed, 28 Aug 2024 (11:35 IST)
ಬಳ್ಳಾರಿ: ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಲಿರುವ ನಟ ದರ್ಶನ್ ಗಾಗಿ ಜೈಲು ಸಿಬ್ಬಂದಿ ಅವರು ಉಳಿಯಬೇಕಾದ ಕೋಣೆಯನ್ನು ತೊಳೆದು ಸ್ವಚ್ಛ ಮಾಡಿಟ್ಟುಕೊಂಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ರಾಜಾತಿಥ್ಯ ಪಡೆದ ಆರೋಪಕ್ಕೊಳಗಾಗಿದ್ದಾರೆ. ಈ ಕಾರಣಕ್ಕೆ ಕೋರ್ಟ್ ಅವರನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸಲು ಆದೇಶ ನೀಡಿದೆ. ಅದಕ್ಕೆ ಮೊದಲು ಅವರು ಇಂದು ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಹಿನ್ನಲೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ.
ಇದಾದ ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ. ಬಳ್ಳಾರಿ ಜೈಲಿಗೆ ದರ್ಶನ್ ಬರಲಿದ್ದಾರೆ ಎಂದು ಗೊತ್ತಾದ ಬೆನ್ನಲ್ಲೇ ಜೈಲು ಸಿಬ್ಬಂದಿ ಅವರು ಇರಬೇಕಾದ ಕೊಠಡಿಯನ್ನು ಸ್ವಚ್ಛಗೊಳಿಸಿಟ್ಟಿದ್ದಾರೆ. ದರ್ಶನ್ ಕೊಠಡಿಯನ್ನು ನಿನ್ನೆಯೇ ತೊಳೆದು ಸ್ವಚ್ಛಗೊಳಿಸಿದ್ದಾರೆ.
ದರ್ಶನ್ ಇರುವ ಕೊಠಡಿಯಲ್ಲಿ ಶೌಚಾಲಯ, ನೀರು ಸೌಲಭ್ಯ, ಸಿಸಿಟಿವಿ ನಿಗಾ, ಕೊಠಡಿಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ವಿಚಾರಣೆ ಎದುರಿಸಲು ಸೌಲಭ್ಯಗಳಿವೆ. ಈ ಜೈಲಿಗೆ ದರ್ಶನ್ ಈ ಹಿಂದೆ ಚೌಕ ಸಿನಿಮಾ ಶೂಟಿಂಗ್ ಗಾಗಿ ಬಂದಿದ್ದರು. ಇದೀಗ ಖೈದಿಯಾಗಿ ಬರುತ್ತಿದ್ದಾರೆ.