Publish Date: Wed, 28 Aug 2024 (11:10 IST)
Updated Date: Wed, 28 Aug 2024 (11:12 IST)
ಬೆಂಗಳೂರು: ಅನರ್ಹ ಬಿಪಿಎಲ್ ಕಾರ್ಡ್ ಗಳಿಗೆ ಕತ್ತರಿ ಹಾಕಿ ಗ್ಯಾರಂಟಿ ಯೋಜನೆ ಪರಿಷ್ಕರಣೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರದಿಂದ ಈಗ ಕೆಲವು ಬಡವರೇ ಸಮಸ್ಯೆಯಾಗುತ್ತಿದೆ.
ಬಿಪಿಎಲ್ ಕಾರ್ಡ್ ಪರಿಷ್ಕರಣೆಯಲ್ಲಿ 12 ಲಕ್ಷ ಕಾರ್ಡ್ ಗಳನ್ನು ಅನರ್ಹಗೊಳಿಸಲು ಸಿದ್ಧತೆ ನಡೆದಿದೆ. ಆದರೆ ಸರ್ಕಾರದ ಹೊಸ ನಿಯಮದಿಂದ ಕೆಲವರು ಈಗ ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ಕಾರ್ಡ್ ರದ್ದತಿ ಪ್ರಕ್ರಿಯೆಯಿಂದ 1,500 ಕೋಟಿ ರೂ. ಹಣ ಉಳಿತಾಯ ಮಾಡಿ ಗ್ಯಾರಂಟಿ ಯೋಜನೆಗೆ ಹೊಂದಿಸಬಹುದು ಎಂಬುದು ಸರ್ಕಾರದ ಲೆಕ್ಕಾಚಾರ.
ಇಷ್ಟು ದಿನ ಮನೆಯ ಯಜಮಾನನ ಆದಾಯ ಮಾತ್ರ ನೋಡಲಾಗುತ್ತಿತ್ತು. ಆದರೆ ಈಗ ಕುಟುಂಬದ ಎಲ್ಲಾ ಸದಸ್ಯರ ಆದಾಯ ಪ್ರಮಾಣವನ್ನೂ ಲೆಕ್ಕ ಹಾಕಿ ವಾರ್ಷಿಕವಾಗಿ 1.20 ಲಕ್ಷ ಕ್ಕಿಂತ ಹೆಚ್ಚಿನ ಆದಾಯ ಹೊಂದಿದವರಿಗೆ ಬಿಪಿಎಲ್ ಕಾರ್ಡ್ ರದ್ದುಗೊಳಿಸಲು ಸರ್ಕಾರ ಮುಂದಾಗಿದೆ.
ಆದರೆ ಯಜಮಾನ, ಯಜಮಾನಿ ಅಲ್ಲದೆ, ಮನೆಯಲ್ಲಿ ಓದುವ ಮಕ್ಕಳ ಆದಾಯವನ್ನೂ ಪರಿಗಣಿಸುವುದು ಎಷ್ಟು ಸರಿ? ಇದು ನಿಜಕ್ಕೂ ಬಡವರಿಗೆ ಅನ್ಯಾಯ ಮಾಡಿದಂತೆ. ಈಗಾಗಲೇ ಅನ್ನಭಾಗ್ಯ ಯೋಜನೆಯಲ್ಲಿ ಪಡಿತರ ಆಹಾರ ಪಡೆಯುತ್ತಿದ್ದ 12 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಈಗ ಆಹಾರ ತಪ್ಪಿಹೋಗಲಿದೆ. ವಿಶೇಷವಾಗಿ ಮಳೆಗಾಲದಲ್ಲಿ ಕಟ್ಟಡ ಕಾರ್ಮಿಕರು, ಕೂಲಿ ಕೆಲಸಗಾರರಿಗೆ ಆದಾಯವಿರುವುದಿಲ್ಲ. ಆದರೆ ವಾರ್ಷಿಕ ಆದಾಯ ಲೆಕ್ಕದಲ್ಲಿ 1.20 ಲಕ್ಷಕ್ಕೂ ಹೆಚ್ಚು ಆದಾಯವಿದೆ ಎಂದು ಸರ್ಕಾರ ಲೆಕ್ಕ ಹಾಕಿ ಬಿಪಿಎಲ್ ಕಾರ್ಡ್ ರದ್ದುಗೊಳಿಸಿದರೆ ನಾವು ಏನು ಮಾಡಬೇಕು ಎಂದು ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.