ಬೆಳಗಾವಿ: ಕನ್ನಡದಲ್ಲಿ ಹೇಳಿ ಎಂದಿದ್ದಕ್ಕೆ ಕರ್ನಾಟಕ ಸಾರಿಗೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಮರಾಠಿ ಪುಂಡರನ್ನು ಪೊಲೀಸರು ಅರೆಸ್ಟ್ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇದೀಗ ಆರೋಪಿಗಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬೆಳಗಾವಿ ಗಡಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕರ್ನಾಟಕ ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರ ಗುಂಪು ಹಲ್ಲೆ ನಡೆಸಿತ್ತು. ಮಹಿಳೆಯೊಬ್ಬರಿಗೆ ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ದಾಳಿ ಮಾಡಲಾಗಿದೆ.
ಘಟನೆ ಬಗ್ಗೆ ವಿವರಿಸಿದ್ದ ಕಂಡಕ್ಟರ್ ನನಗೆ ಮರಾಠಿ ಬರಲ್ಲ ಸರ್. ಅದಕ್ಕೇ ಕನ್ನಡದಲ್ಲಿ ಹೇಳಿ ಎಂದಿದ್ದೆ. ಆ ಮಹಿಳೆ ತನಗೆ ಮಾತ್ರವಲ್ಲದೆ ಮತ್ತೊಬ್ಬ ಯುವಕನಿಗೂ ಫ್ರೀ ಟಿಕೆಟ್ ತೆಗೆದುಕೊಂಡಿದ್ದಳು. ಇದಕ್ಕೇ ವಾಗ್ವಾದವಾಗಿತ್ತು ಎಂದಿದ್ದರು.
ಘಟನೆಗೆ ಸಂಬಂಧಪಟ್ಟಂತೆ ಈಗ ಆರೋಪಿಗಳನ್ನು ಬಂಧಿಸಿದ ಬೆಳಗಾವಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಎಲ್ಲಾ ಆರೋಪಿಗಳಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.