Publish Date: Thu, 19 Jan 2023 (12:01 IST)
Updated Date: Thu, 19 Jan 2023 (12:20 IST)
ಕಾರವಾರ : ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ವಿದೇಶಿ ಪ್ರಜೆಗಳ ದಂಡೇ ಹರಿದುಬರುತಿತ್ತು. ಬೀಚ್ನಲ್ಲಿ ಅರೆಬರೆ ಬಟ್ಟೆ ತೊಟ್ಟು ಮೋಜು-ಮಸ್ತಿಯಲ್ಲಿ ನಿರತರಾಗುತಿದ್ದ ವಿದೇಶಿಗರು, ಕೊರೊನಾ ನಂತರ ಭಿಕ್ಷೆ ಬೇಡುವುದು ಹಾಗೂ ವ್ಯಾಪಾರ ಮಾಡಲು ಇದೀಗ ಗೋಕರ್ಣದತ್ತ ಬರುತ್ತಿದ್ದಾರೆ.
ಹೌದು, ಇದು ಆಶ್ಚರ್ಯ ಎನಿಸಿದರೂ ಸತ್ಯ. ಈ ಹಿಂದೆ ಸಾವಿರಾರು ಸಂಖ್ಯೆಯಲ್ಲಿ ವಿದೇಶಿಗರು ಗೋಕರ್ಣಕ್ಕೆ ಬಂದು ವರ್ಷಗಟ್ಟಲೇ ನೆಲೆಸಿ ಎಂಜಾಯ್ ಮಾಡುತಿದ್ದರು. ಇದರಿಂದಾಗಿ ಗೋಕರ್ಣದ ಹೋಮ್ ಸ್ಟೇ, ರೆಸಾರ್ಟ್ಗಳಿಗೆ ಉತ್ತಮ ಆದಾಯ ಬರುತ್ತಿತ್ತು.
ಯಾವಾಗ ಕೊರೊನಾ ಸಂಕಷ್ಟ ಎದುರಾಯಿತೊ, ಹಲವು ವಿದೇಶಿಗರು ತಮ್ಮ ದೇಶಕ್ಕೆ ತೆರಳಲು ಹಣವಿಲ್ಲದೇ ಕೇಂದ್ರ ಸರ್ಕಾರದ ಮೊರೆ ಹೋಗಿದ್ದರು. ಕೆಲವರ ವೀಸಾ ಅವಧಿ ಮುಗಿದಿದ್ದರಿಂದ ವೀಸಾ ವಿಸ್ತರಣೆಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಇನ್ನೂ ಹಲವರು ಇಲ್ಲಿಯೇ ನೆಲಸಿದ್ದು, ತಮ್ಮ ದೇಶಕ್ಕೆ ಮರಳಲು ಭಿಕ್ಷಾಟನೆಯ ಮೊರೆ ಹೋಗಿದ್ದಾರೆ.