Publish Date: Sat, 16 Jul 2022 (16:10 IST)
Updated Date: Sat, 16 Jul 2022 (17:04 IST)
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಶನಿವಾರ ಮಾತನಾಡಿದ ಅವರು ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸಂಬಂಧಿಸಿದಂತೆ ಸರ್ಕಾರ ವಾರ್ಡ್ ಮರುವಿಂಗಡಣೆಯನ್ನು ಪ್ರಕಟಿಸಿ, 15 ದಿನ ಆಆಕ್ಷೇಪಗಳಿಗೆ ಅವಕಾಶ ಮಾಡಿಕೊಟ್ಟಿತ್ತು. ಈ ವಿಚಾರವಾಗಿ 3 ಸಾವಿರಕ್ಕೂ ಹೆಚ್ಚು ಆಕ್ಷೇಪಗಳು ಸಲ್ಲಿಕೆಯಾಗಿದ್ದು ಇದರಲ್ಲಿ ಹಲವು ಆಕ್ಷೇಪಗಳು ವಾರ್ಡ್ ಗಳ ಹೆಸರು ಬದಲಾವಣೆ ವಿಚಾರವಾಗಿವೆ. ಉಳಿದಂತೆ ಎಲ್ಲ ಆಕ್ಷೇಪಗಳು ಅವೈಜ್ಞಾನಿಕವಾಗಿ ವಾರ್ಡ್ ಮರುವಿಂಗಡಣೆ ಮಾಡಲಾಗಿದೆ ಎಂಬ ವಿಚಾರವಾಗಿ ಸಲ್ಲಿಕೆಯಾಗಿದೆ. ಅಮಿಬಾಗಳಿಗಾದರೂ ತಕ್ಕಮಟ್ಟಿಗೆ ಆಕಾರವಿರುತ್ತದೆ. ಆದರೆ ಈಗ ಮರುವಿಂಗಡಣೆಯಾದ ವಾರ್ಡ್ ಗಳಿಗೆ ಆಕಾರವೇ ಇಲ್ಲದಂತಾಗಿದೆ ಎಂದರು.
ನಾನು ಈ ಹಿಂದೆ ಅನೇಕ ವಿಚಾರ ಹೇಳಿದ್ದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಕಂದಾಯ ಅಧಿಕಾರಿಗಳು, ಜಂಟಿ ಆಯುಕ್ತರು ಸೇರಿ ವಾರ್ಡ್ ಗಳ ಗಡಿ ಕುರಿತು ಚರ್ಚೆ ಮಾಡಿ ಮಾರ್ಗಸೂಚಿಯಂತೆ ನಿರ್ಧಾರ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ 28 ವಿಧಾನಸಭಾ ಕ್ಷೇತ್ರದ ಕಂದಾಯ ಅಧಿಕಾರಿಗಳಿಗೆ, ಜಂಟಿ ಆಯುಕ್ತರಿಗೆ ಯಾವುದೇ ಮಾಹಿತಿ ಇಲ್ಲ. ಈ ಮರುವಿಂಗಡಣೆ ಪ್ರಕ್ರಿಯೆ ಬಿಜೆಪಿ ಶಾಸಕರು, ಸಂಸದರ ಕಚೇರಿಯಲ್ಲಿ ನಿರ್ಧಾರವಾಗಿ ಕೇಶವಕೃಪದಲ್ಲಿ ಅಂತಿಮ ಒಪ್ಪಿಗೆ ಪಡೆಯಲಾಗಿದೆ ಎಂದು ಹೇಳಿದರು.
ಈಗ ಇಷ್ಟೋಂದು ಆಕ್ಷೇಪ ವ್ಯಕ್ತವಾದ ಬಳಿಕವೂ ಕಂದಾಯ ಅಧಿಕಾರಿಗಳಾಗಲಿ, ಜಂಟಿ ಆಯುಕ್ತರಾಗಲಿ ಬಂದು ಪರಿಶೀಲನೆ ನಡೆಸಲೇ ಇಲ್ಲ. ಈಗ ಈ ಆಕ್ಷೇಪಗಳು ಸಿಎಂ ಕಚೇರಿಯಂದ ಆಚೆ ಬರಲೇ ಇಲ್ಲ. 243 ವಾರ್ಡ್ ಗಳು ಸರಿಯಾಗಿವೆ ಎಂದು ಸಣ್ಣ ಬದಲಾವಣೆ ಇಲ್ಲದೆ ಮತ್ತೆ ಅದನ್ನೇ ಬಿಡುಗಡೆ ಮಾಡಿದ್ದಾರೆ. ಕೇವಲ ಹೆಸರಿಗೆ ಮಾತ್ರ ಆಕ್ಷೇಪಗಳನ್ನು ಸಂಗ್ರಹಿಸಿದ್ದಾರೆ ಎಂದು ತಿಳಿಸಿದರು.
ಈ ವಿಂಗಡಣೆ ಪ್ರಕ್ರಿಯೆ ಜನರಿಗೆ ಅನುಕೂಲವಾಗಲು ಮಾಡಿಲ್ಲ, ಬಿಜೆಪಿ ಪಕ್ಷಕ್ಕೆ ಅನುಕೂಲವಾಗುವಂತೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷ ಎಲ್ಲಿ ಗೆಲ್ಲಲು ಸಾಧ್ಯವಿದೆಯೋ ಅಲ್ಲಿ ಮತ ವಿಭಜಿಸಿ ಸೋಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಪ್ರತಿ ಚುನಾವಣೆಯಲ್ಲೂ ಶೇ.20ರಷ್ಟು ತಟಸ್ಥ ಮತದಾರರು ಯಾವುದೇ ಪಕ್ಷಕ್ಕೆ ಸೇರದೆ ಮತಹಾಕುತ್ತಾರೆ. ಅವರು ಹಾಕುವ ಮತಗಳೇ ನಿರ್ಣಾಯಕವಾಗುತ್ತದೆ. ಈ ವಿಶ್ಲೇಷಣೆಯನ್ನು ಅವರು ಚುನಾವಣೆ ಫಲಿತಾಂಶ ಬಂದಾಗ ಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.