Publish Date: Tue, 15 Feb 2022 (15:04 IST)
Updated Date: Tue, 15 Feb 2022 (15:08 IST)
ಟ್ರಾಫಿಕ್ ಸಿಗ್ನಲ್ ಗಳಲ್ಲಿ ಹಾಕಿದ್ದ ಬಲ್ಪ್ ಮತ್ತು ಬ್ಯಾಟರಿಗಳನ್ನು ಕದಿಯುತ್ತಿದ್ದ ಕಿಲಾಡಿ ದಂಪತಿಯನ್ನು ಬೆಂಗಳೂರಿನ ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.
ಬ್ಯಾಟರಿಗಳನ್ನ ಖರೀದಿ ಮಾಡುತ್ತಿದ್ದ ಧನಶೇಖರ್ ಮತ್ತು ಆತನ ಪತ್ನಿಯನ್ನು ಬಂಧಿಸಲಾಗಿದ್ದು, ಸುಮಾರು 90 ಲಕ್ಷ ರೂ.
ಮೌಲ್ಯದ 230 ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರತಿ ದಿನ ರಾತ್ರಿ 3ರಿಂದ 5 ಗಂಟೆ ಅವಧಿಯಲ್ಲಿ ದ್ವಿಚಕ್ರದಲ್ಲಿ ಬಂದು ಸಿಗ್ನಲ್ ಗಳಲ್ಲಿ ಲೈಟ್ ಮತ್ತು ಸಿಸಿಟಿವಿ ಕಾರ್ಯ ನಿರ್ವಹಿಸಲು ಹಾಕಲಾಗಿದ್ದ ಬ್ಯಾಟರಿಗಳನ್ನು ಈ ದಂಪತಿ ಕದಿಯುತ್ತಿದ್ದರು. ನಂಬರ್ ಪ್ಲೇಟ್ ಕಾಣದಿರಲು ವಾಹನದ ಬ್ರೇಕ್ ಲೈಟ್ ಕಟ್ ಮಾಡಿದ್ದರು.
ವಿಶೇಷ ತಂಡ ರಚನೆ ಮಾಡಿದ್ದ ಅಶೋಕನಗರ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ದಂಪತಿ ಗೊರಗುಂಟೆ ಪಾಳ್ಯದ ಕಡೆ ತೆರಳುವುದು ಗಮನಿಸಿ ತನಿಖೆ ನಡೆಸಿ ಬಂಧಿಸಿದ್ದಾರೆ.
ಮೋಜಿನ ಜೀವನ ಮಾಡುವ ಉದ್ದೇಶದಿಂದ ಸುಲಭವಾಗಿ ಹಣ ಸಂಪಾದನೆ ಮಾಡಲು ಕಳ್ಳತನಕ್ಕಿಳಿದಿದ್ದ ದಂಪತಿ, ಬೆಂಗಳೂರಿನ ಅಶೋಕನಗರ, ವಿಲ್ಸನ್ ಗಾರ್ಡನ್, ವೈಯಾಲಿಕಾವಲ್, ರಾಜಾಜಿನಗರ, ಇಂದಿರಾನಗರ ಸೇರಿದಂತೆ ಹಲವು ಸಿಗ್ನಲ್ ಗಳಲ್ಲಿ ಕಳ್ಳತನ ಮಾಡಿದ್ದಾರೆ.
ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 68 ಪ್ರಕರಗಳು ಪತ್ತೆಯಾಗಿದ್ದು, ಬ್ಯಾಟರಿಗಳ ಅಂದಾಜು ಬೆಲೆ 20 ಲಕ್ಷ ರೂ ಎಂದು ಅಂದಾಜಿಸಲಾಗಿದೆ. ಕದ್ದ ಬ್ಯಾಟರಿಗಳನ್ನ ಗುಜರಿ ಅಂಗಡಿಗಳಿಗೆ ಮಾರಾಟ ಮಾಡಿರುವುದು ತಿಳಿದು ಬಂದಿದೆ.