Publish Date: Thu, 18 Sep 2025 (10:28 IST)
Updated Date: Thu, 18 Sep 2025 (10:35 IST)
ಬೆಂಗಳೂರು: ಕರ್ನಾಟಕ ಜಾತಿ ಗಣತಿಯಲ್ಲಿ ಧರ್ಮ, ಜಾತಿ ನಮೂದಿಸುವ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈ ನಡುವೆ ಕಾಂಗ್ರೆಸ್ ನಾಯಕ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ನಾನು ಹಿಂದೂ ಎಂದು ಹಾಕಲ್ಲ, ಹಿಂದೂ ಧರ್ಮವೇ ಅಲ್ಲ ಎಂದು ಹೇಳಿದ್ದಾರೆ.
ಲಿಂಗಾಯತ, ಹಿಂದೂ ಧರ್ಮ ಧರ್ಮವೇ ಅಲ್ಲ. ಅದೊಂದು ಸಂಸ್ಕೃತಿ ಅಷ್ಟೇ. ಶರಣ ತತ್ವ, ಲಿಂಗಾಯತ ತತ್ವಧಾರಿತ ಚಳವಳಿ ಎಂದು ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ವೀರಶೈವ, ಲಿಂಗಾಯತ ಮತದಲ್ಲೇ ಗೊಂದಲಗಳಿವೆ ಎಂದಿದ್ದಾರೆ.
ಕರ್ನಾಟಕ ಜಾತಿ ಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಏನೆಂದು ನಮೂದಿಸಬೇಕು ಎನ್ನುವ ವಿಚಾರವಾಗಿ ಅವರು ಈ ರೀತಿ ಹೇಳಿದ್ದಾರೆ. ನನ್ನ ಧರ್ಮ ಯಾವುದು ಎಂದು ಕೇಳಿದರೆ ನನಗೆ ಧರ್ಮ ಇಲ್ಲ ಎಂದು ಬರೆಸುತ್ತೇನೆ. ಇದು ನನ್ನ ವೈಯಕ್ತಿಕ ವಿಚಾರ. ನನ್ನ ಹೆಂಡತಿ ಬರೆಸಿದರೆ ನಾನೇನೂ ಹೇಳಕ್ಕಾಗಲ್ಲ ಎಂದಿದ್ದಾರೆ.
ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸುವಂತೆ ಲಿಂಗಾಯತ ಸಮುದಾಯದ ಮಠಾಧೀಶರು ಕರೆ ನೀಡಿದ್ದಾರೆ. ಹಿಂದೂ ಎಂದು ಬರೆಸಿ ಎಂದು ಪಂಚಮಸಾಲಿ ಜಾಗೃತ ಸಭೆ ಕರೆ ನೀಡಿದೆ. ಇದರಿಂದಾಗಿ ಈಗ ಜಾತಿಗಣತಿ ಎನ್ನುವುದು ಹಿಂದೂ ವರ್ಸಸ್ ಲಿಂಗಾಯತ ವಾರ್ ಶುರುವಾಗಿದೆ.