Publish Date: Thu, 03 Jan 2019 (19:41 IST)
Updated Date: Thu, 03 Jan 2019 (19:53 IST)
ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ಖಂಡಿಸಿ ಕೇರಳ ಬಂದ್ಗೆ ಕರೆ ನೀಡಲಾಗಿದೆ. ಶಬರಿಮಲೆ ಕರ್ಮ ಸಮಿತಿ ಬಂದ್ಗೆ ಕರೆ ನೀಡಿದ್ದು, ಬಿಜೆಪಿ, ಹಿಂದೂಪರ ಸಂಘಟನೆಗಳು ಹಾಗೂ ಯುಡಿಎಫ್ ಬಂದ್ಗೆ ಬೆಂಬಲ ಘೋಷಿಸಿವೆ. ಏತನ್ಮಧ್ಯೆ ಪಂದಳಂ ಹತ್ತಿರ ಪ್ರತಿಭಟನೆ ನಡೆಸುತ್ತಿದ್ದ ಭಕ್ತರ ಮೇಲೆ ನಡೆದ ಕಲ್ಲು ತೂರಾಟದಲ್ಲಿ ಭಕ್ತನೊಬ್ಬ ಸಾವನ್ನಪ್ಪಿದ್ದಾನೆ.
ಪಂದಳಂ ಬಳಿ ಪ್ರತಿಭಟನೆ ನಡೆಸುತ್ತಿದ್ದ ಅಯ್ಯಪ್ಪ ಭಕ್ತರ ಮೇಲೆ ಸಿಪಿಎಂ ಕಚೇರಿಯ ಮೇಲ್ಬಾಗದಿಂದ ಕಲ್ಲು ತೂರಾಟ ನಡೆಸಲಾಗಿದ್ದು ಕಲ್ಲೇಟಿಗೆ ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡಿದ್ದ ಚಂದ್ರನ್ ಉನ್ನಿತ್ತನ್(54) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಘಟನೆಯಿಂದಾಗಿ ಕೇರಳ ಪ್ರಕ್ಷುಬ್ಧಗೊಂಡಿದ್ದು ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ. ಬಸ್ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ.
ಅಯ್ಯಪ್ಪ ಸನ್ನಿಧಾನಕ್ಕೆ ಮಹಿಳೆಯರ ಪ್ರವೇಶವನ್ನು ಖಂಡಿಸಿ ಅಯ್ಯಪ್ಪ ಭಕ್ತರು ಶಬರಿಮಲೆ ಕರ್ಮ ಸಮಿತಿ ನೇತೃತ್ವದಲ್ಲಿ ಪಂದಳಂನಲ್ಲಿರುವ ಸಿಪಿಎಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ಪಕ್ಕದ ಕಟ್ಟಡದಿಂದ ಕಲ್ಲುತೂರಾಟ ನಡೆಸಲಾಗಿತ್ತು. ಘಟನೆಯಲ್ಲಿ ಚಂದ್ರನ್ ಗಂಭೀರವಾಗಿ ಗಾಯಗೊಂಡಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಚಂದ್ರನ್ ಸಾವನ್ನಪ್ಪಿದ್ದಾರೆ.