Publish Date: Mon, 10 Oct 2022 (16:25 IST)
Updated Date: Mon, 10 Oct 2022 (17:27 IST)
ಆರ್ಟಿಓ ಅಧಿಕಾರಿಗಳು ಆಟೋಗಳನ್ನು ಸೀಜ್ ಮಾಡಿ ದಂಡ ಹಾಕುತ್ತಿದ್ದಾರೆ. ಇದನ್ನು ಖಂಡಿಸಿ ಆಟೋ ಚಾಲಕರು ದಿಢೀರ್ ಎಂದು ಬೃಹತ್ ಪ್ರತಿಭಟನೆ ಕೈಗೊಂಡಿದ್ದಾರೆ. ಈ ಮೂಲಕ ಸರ್ಕಾರ ಮತ್ತು ಆಟೋ ಚಾಲಕರ ನಡುವೆ ಜಟಾಪಟಿ ಆರಂಭವಾಗಿದೆ.
ಸಾರಿಗೆ ಇಲಾಖೆ ನೀಡಿದ್ದ ನೋಟಿಸ್ಗೆ ಉತ್ತರ ನೀಡಲು ಸೋಮವಾರ ಮಧ್ಯಾಹ್ನದ ತನಕ ಗಡುವು ನೀಡಲಾಗಿತ್ತು. ಆದರೆ ಓಲಾ, ಉಬರ್ ಕಂಪನಿಗಳು ಉತ್ತರ ಕೊಡದ ಹಿನ್ನಲೆಯಲ್ಲಿ ಆರ್ಟಿಒ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದರು.
ವಿವಾದ ಏನು? ಓಲಾ, ಊಬರ್ ಕಂಪನಿಗಳು ಕ್ಯಾಬ್ ಸೇವೆಗೆ ಮಾತ್ರ ಅನುಮತಿ ಪಡೆದಿವೆ. ಆದರೆ ಆಟೋ ಸೇವೆ ನೀಡುತ್ತಿವೆ. ಸರ್ಕಾರ ಆಟೋಗಳಿಗೆ ಕನಿಷ್ಠ ದರ ನಿಗದಿ ಮಾಡಿವೆ. ಆದರೆ ಅಗ್ರಿಗೇಟರ್ ಟ್ಯಾಕ್ಸಿ ಕಂಪನಿಗಳು ಜನರಿಂದ ಹೆಚ್ಚಿನ ದರ ವಸೂಲಿ ಮಾಡುತ್ತಿವೆ ಎಂಬುದು ಆರೋಪ.
ಈ ಹಿನ್ನಲೆಯಲ್ಲಿ ಸಾರಿಗೆ ಇಲಾಖೆ ಓಲಾ, ಉಬರ್ ಕಂಪನಿಗಳಿಗೆ ನೋಟಿಸ್ ನೀಡಿತ್ತು. ನೋಟಿಸ್ಗೆ ಮೂರು ದಿನದಲ್ಲಿ ಉತ್ತರ ನೀಡಬೇಕು ಇಲ್ಲವಾದಲ್ಲಿ ಆಟೋ ಸೇವೆ ಸ್ಥಗಿತಗೊಳಿಸಬೇಕು ಎಂದು ಸೂಚನೆ ನೀಡಿತ್ತು. ಆದರೆ ಕಂಪನಿಗಳು ಯಾವುದೇ ಉತ್ತರ ಕೊಟ್ಟಿಲ್ಲ.
ಚಾಲಕರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಎಸಿಪಿ ಶ್ರೀನಿವಾಸ್, ಆರ್ಟಿಒ ಸುಬ್ಬಯ್ಯ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಧರಣಿ ನಿರತ ಆಟೋ ಚಾಲಕರು ಮತ್ತು ಆರ್ಟಿಒ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಅಧಿಕಾರಿಗಳು ಆಟೋ ಚಾಲಕರ ಮನವೊಲಿಸಲು ಪ್ರಯತ್ನ ನಡೆಸಿದರು.