Select Your Language

Notifications

webdunia
webdunia
webdunia
webdunia

ಸುಮಂತ್‌ ಸಾವು ಪ್ರಕರಣದಲ್ಲಿ ಊಹಿಸಲಾಗದ ಮಹತ್ವದ ಬೆಳವಣಿಗೆ

Belthangady Sumanth Death Case
Photo Credit X
ಬೆಳ್ತಂಗಡಿ: ತಾಲ್ಲೂಕನ್ನೇ ಬೆಚ್ಚಿಬೀಳಿಸಿದ  ಗೆರುಕಟ್ಟೆ ಸಮೀಪದ ಸಂಬೋಳ್ಯದದ ಸುಮಂತ್ ಅಸಹಜ ಸಾವು ಪ್ರಕರಣ ಪೊಲೀಸ್ ಇಲಾಖೆಗೆ ಸವಾಲಿನ ಪ್ರಶ್ನೆಯಾಗಿದೆ.  

ಸುಮಂತ್‌ನ ಅನುಮಾನಾಸ್ಪದ ಸಾವಿನ ಸತ್ಯಾಸತ್ಯತೆಯನ್ನು ಪತ್ತೆಹಚ್ಚುವ ತನಿಖೆಯ ಭಾಗವಾಗಿ, ನ್ಯಾಯಾಲಯದ ಪೂರ್ವಾನುಮತಿಯೊಂದಿಗೆ ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ  'ಬ್ರೈನ್ ಮ್ಯಾಪಿಂಗ್' ಮತ್ತು 'ನಾರ್ಕೋ-ಅನಾಲಿಸಿಸ್' ಪರೀಕ್ಷೆಗಳ ಪ್ರಕ್ರಿಯೆ ಆರಂಭಗೊಂಡಿದೆ.

ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ನೇತೃತ್ವದಲ್ಲಿ ಈ ತನಿಖೆ ನಡೆಯುತ್ತಿದೆ. ತನಿಖೆಯ ಮೊದಲ ಹಂತಕ್ಕಾಗಿ ಸುಮಂತ್‌ನ ಕುಟುಂಬದ ಐವರು ಸದಸ್ಯರನ್ನು ಈಗಾಗಲೇ ಬೆಂಗಳೂರಿಗೆ ಕರೆದೊಯ್ಯಲಾಗಿದೆ. 
ಆಗಸ್ಟ್ 10 ರಂದು, ಸುಮಂತ್‌ನ ತಂದೆ ಸುಬ್ರಹ್ಮಣ್ಯ ನಾಯಕ್ ಮತ್ತು ತಾಯಿ ರತ್ನಾವತಿ ಅವರನ್ನು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ನಂತರ, ಸುಮಂತ್‌ನ ಸಹೋದರ ಸುದರ್ಶನ್ ಅವರನ್ನು ಮಧ್ಯಾಹ್ನದಿಂದ ಸಂಜೆಯವರೆಗೆ ವಿಚಾರಣೆ ನಡೆಸಲಾಯಿತು.

ಆಗಸ್ಟ್ 11 ರಂದು ರತ್ನಾವತಿ ಅವರ ಸಹೋದರ ರಾಧಾಕೃಷ್ಣ ಮತ್ತು ಸಂಬಂಧಿಕ ಲಕ್ಷ್ಮೀನಾರಾಯಣ ಅವರನ್ನು ವಿಚಾರಣೆ ನಡೆಸಿ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಯಿತು. ತನಿಖೆಯ ವೇಳೆ ಸಂಗ್ರಹಿಸಲಾದ ಮಾಹಿತಿಯೊಂದಿಗೆ ಈ ಐವರು ವ್ಯಕ್ತಿಗಳು ನೀಡಿದ ಉತ್ತರಗಳನ್ನು ತಜ್ಞರು ಈಗ ಹೋಲಿಕೆ ಮಾಡಿ ವಿಶ್ಲೇಷಿಸುತ್ತಿದ್ದಾರೆ.

ಬ್ರೈನ್ ಮ್ಯಾಪಿಂಗ್ ಪ್ರಕ್ರಿಯೆಯ ಮುಂದಿನ ಹಂತಕ್ಕೆ ಹಾಜರಾಗುವಂತೆ ಸಂಬಂಧಪಟ್ಟ ವ್ಯಕ್ತಿಗಳಿಗೆ ಸೂಚನೆ ನೀಡಲಾಗಿದೆ. ಪ್ರಕರಣದಲ್ಲಿ ಗುರುತಿಸಲಾದ ಇತರ ಶಂಕಿತರನ್ನು ಕೂಡ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸುತ್ತಿದೆ.

ಸ್ಮರಣೀಯವೆಂದರೆ, ಗೆರುಕಟ್ಟೆ ಸರ್ಕಾರಿ ಪ್ರೌಢಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದ ಸುಮಂತ್, ಜನವರಿ 14, 2026 ರಂದು ಬೆಳಿಗ್ಗೆ ಸಮೀಪದ ದೇವಸ್ಥಾನಕ್ಕೆ ಧನುಪೂಜೆಗಾಗಿ ತೆರಳುತ್ತಿದ್ದಾಗ ನಿಗೂಢವಾಗಿ ನಾಪ್ತತೆಯಾಗಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದನು.  

ಬಾಲಕನ ಸಾವು ಸಹಜವಾಗಿರಲಿಲ್ಲ ಮತ್ತು ಅವನನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ ಎಂಬ ಅನುಮಾನಗಳು ವ್ಯಕ್ತವಾಗಿದ್ದವು. ಪೊಲೀಸರು ವಿಶೇಷ ತಂಡವನ್ನು ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರೂ, ಈ ಪ್ರಕರಣದ ಸುತ್ತಲಿನ ನಿಗೂಢತೆ ಇನ್ನೂ ಬಗೆಹರಿದಿಲ್ಲ ಮತ್ತು ಈವರೆಗೆ ಯಾವುದೇ ಸ್ಪಷ್ಟ ಉತ್ತರ ಲಭ್ಯವಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಯಾವುದೇ ಐಟಿ, ಇಡಿ ಭಯದಿಂದ ಎಸ್ಕೇಪ್ ಆಗಿಲ್ಲ, ಜ್ಞಾನೇಂದ್ರ ನಾಪತ್ತೆ ಸಂಬಂಧ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ