Publish Date: Thu, 19 Jan 2023 (08:57 IST)
Updated Date: Thu, 19 Jan 2023 (09:01 IST)
ಮಂಡ್ಯ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಲವು ಸಾಮಾಜಿಕ ಕೈಂಕರ್ಯಗಳನ್ನ ಮಾಡಿಕೊಂಡು ಬರುತ್ತಿದೆ. ಅದರಲ್ಲಿ ಮದ್ಯವ್ಯಸನಿಗಳಿಗೆ ಮದ್ಯ ಕುಡಿಯುವ ಚಟ ಬಿಡಿಸುವ ಶಿಬಿರಗಳನ್ನ ಆಯೋಜನೆ ಮಾಡಿಕೊಂಡು ಬರುತ್ತಿದ್ದು, ಸಂಸ್ಥೆಯ ಸಮಾಜಿಕ ಬದ್ಧತೆ ಎದ್ದು ಕಾಣುತ್ತಿದೆ.
ಅದೇ ರೀತಿ ಮಂಡ್ಯದ ಮದ್ದೂರಿನಲ್ಲಿ ಸಂಸ್ಥೆ ವತಿಯಿಂದ ನಡೆದ 1639 ನೇ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಯವರು ಆಶೀರ್ವಚನ ನೀಡಿದ್ರು.
ಮಂಡ್ಯದ ಮದ್ದೂರು ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ನಡೆದ ಶಿಬರವನ್ನ ಧರ್ಮಸ್ಥಳದ ಧರ್ಮಾಧಿಕಾರಿಗಳು, ರಾಜ್ಯಸಭಾ ಸದಸ್ಯ ವಿರೇಂದ್ರ ಹೆಗ್ಗಡೆಯವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದ್ರು. ಬಳಿಕ ಶಿಬಿರಾರ್ಥಿಗಳ ಕುರಿತು ಮಾತನಾಡಿದ ಅವರು, ಕುಡಿತದ ಚಟ ಹೊಂದಿರುವವರೆಲ್ಲ ಕೆಟ್ಟವರಲ್ಲ,
ಅವರ ದುಶ್ಚಟಗಳು ಅವರನ್ನ ಕೆಟ್ಟವರನ್ನಾಗಿ ಬಿಂಬಿಸಿದೆ. ಖುಷಿಗೋ, ಕುತೂಹಲಕ್ಕೊ ಅಥವಾ ಸಹವಾಸ ದೋಷಕ್ಕೊ ಮನುಷ್ಯ ಮದ್ಯ ಸೇವಿಸುವುದನ್ನ ಕಲಿಯುತ್ತಾನೆ. ಆದರೆ ಬಳಿಕ ಮದ್ಯಪಾನವೇ ಆತನನ್ನ ಕೈವಶ ಮಾಡಿಕೊಳ್ಳುತ್ತೆ ಎಂದು ಹೇಳಿದರು.