Publish Date: Mon, 07 Oct 2024 (11:42 IST)
Updated Date: Mon, 07 Oct 2024 (11:45 IST)
ಬೆಂಗಳೂರು: ಮುಡಾ ಹಗರಣ ವಿಚಾರ ರಾಜ್ಯದಲ್ಲಿ ಸದ್ದು ಮಾಡಲಾರಂಭಿಸಿದ ಮೇಲೆ ರಾಜ್ಯ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಮುಡಾ ಹಗರಣ ಬೆಳಕಿಗೆ ಬಂದ ಮೇಲೆ ವಿಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದಿದೆ. ಇತ್ತ ಕೋರ್ಟ್ ಗೂ ಸಿಎಂ ವಿರುದ್ಧ ತನಿಖೆಗೆ ಆದೇಶಿಸಿದೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅಧಿಕಾರ ಉಳಿಸಿಕೊಳ್ಳುವುದರತ್ತಲೇ ಗಮನ ಹರಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಅದರ ಬೆನ್ನಲ್ಲೇ ಮುಖ್ಯಮಂತ್ರಿಗಳು ತಮ್ಮ ಕಾರ್ಯಕ್ರಮ ಪಟ್ಟಿಗಳನ್ನು ಕಡೇ ಕ್ಷಣದಲ್ಲಿ ಬದಲು ಮಾಡುತ್ತಿದ್ದಾರೆ. ಕೆಲವು ಉದ್ಘಾಟನಾ ಕಾರ್ಯಕ್ರಮಗಳಿಗೆ ಸಿಎಂ ಗೈರಾಗುವ ಹಿನ್ನಲೆಯಲ್ಲಿ ಕಾರ್ಯಕ್ರಮಗಳೇ ರದ್ದಾಗುತ್ತಿದೆ. ಇದಕ್ಕೆ ತಕ್ಕಂತೆ ಸಚಿವರೂ ವಿಧಾನಸೌಧಕ್ಕೆ ಬರುವುದೇ ಕಡಿಮೆಯಾಗಿದೆ.
ಕೆಲವೊಬ್ಬ ಸಚಿವರು ತಮ್ಮ ಇಲಾಖೆಗಳನ್ನೇ ಮರೆತಿದ್ದಾರೆ. ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸುತ್ತಿಲ್ಲ. ಇದರಿಂದಾಗಿ ಆಡಳಿತಕ್ಕೆ ತುಕ್ಕು ಹಿಡಿದಂತಾಗಿದೆ. ಸಚಿವರುಗಳೇ ಅಸಡ್ಡೆ ತೋರಿರುವಾಗ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ವಿಪರ್ಯಾಸವೆಂದರೆ ಪ್ರತಿಪಕ್ಷವೂ ಇದರ ಬಗ್ಗೆ ಸಶಕ್ತವಾಗಿ ಧ್ವನಿಯೆತ್ತುತ್ತಿಲ್ಲ. ಒಟ್ಟಿನಲ್ಲಿ ಹಗರಣಗಳ ಬಿಸಿ ನಡುವೆ ಜನರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ.